ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ 5,716 ಕೋ. ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಹೊಸದಿಲ್ಲಿ, ಫೆ. 19: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 5,716 ಕೋ. ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮುಂಬೈಯ 10 ಸ್ಥಳಗಳ ಸಹಿತ 39 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇನಾಲಯ ಹೇಳಿದೆ.
ನೀರವ್ ಮೋದಿಗೆ ಮೊದಲ ಎಲ್ಒಯು (ಲೆಟರ್ ಆಫ್ ಅಂಡರ್ಟೇಕಿಂಗ್) ಅನ್ನು 2011 ಮಾರ್ಚ್ನಲ್ಲಿ ನೀಡಲಾಗಿತ್ತು ಅನಂತರ ಆಗಾಗ ನೀಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ನೀರವ್ ಮೋದಿ ಹಾಗೂ ಇತರ ಆರೋಪಿಗಳಿಗೆ ನೀಡಲಾದ ಸಮನ್ಸ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೋದಿ ಹಾಗೂ ಅವರ ಉದ್ಯಮ ಪಾಲುದಾರ ಮೆಹುಲ್ ಚೋಕ್ಸಿ ಅವರಿಗೆ ಕಪ್ಪು ಹಣ ಬಿಳುಪು ತಡೆ ಕಾಯ್ದೆ ಅಡಿಯಲ್ಲಿ ಶುಕ್ರವಾರ ಸಮನ್ಸ್ ಜಾರಿ ಮಾಡಲಾಗಿತ್ತು ಹಾಗೂ ಒಂದು ವಾರದ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು ಎಂದು ಅದು ಹೇಳಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಮಾಜಿ ಡೆಪ್ಯುಟಿ ಮ್ಯಾನೇಜರ್ ಗೋಕುಲ್ನಾಥ್ ಶೆಟ್ಟಿ ಅವರನ್ನು ಮುಂಬೈಯ ಬ್ರಾಡಿ ಹೌಸ್ ಶಾಖೆಯಿಂದ ಭಡ್ತಿ ಅಥವಾ ವರ್ಗಾವಣೆ ಮಾಡಿಲ್ಲ ಯಾಕೆ ಎಂಬ ಬಗ್ಗೆ ಕೂಡ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಗೋಕುಲನಾಥ್ ಶೆಟ್ಟಿಗೆ ಒಂದೇ ಶಾಖೆಯಲ್ಲಿ ಒಂದೇ ರೀತಿಯ ಕೆಲಸ ನಿರ್ವಹಿಸಲು ಕಳೆದ ಕೆಲವು ವರ್ಷಗಳಿಂದ ಅವಕಾಶ ನೀಡಲಾಗಿತ್ತು. ಬ್ಯಾಂಕ್ ನಿಯಮದ ಪ್ರಕಾರ ಸ್ಕೇಲ್-1 ಅಧಿಕಾರಿಯನ್ನು ಪ್ರತಿ ಆರು ತಿಂಗಳಿಗೆ ಒಮ್ಮೆ ಬೇರೆ ಕೆಲಸಕ್ಕೆ ನಿಯೋಜಿಸಬೇಕು. ಮೂರು ವರ್ಷಗಳಿಗೊಮ್ಮೆ ಇನ್ನೊಂದು ಶಾಖೆಗೆ ವರ್ಗಾಯಿಸಬೇಕು.