ಮೋದಿಜೀ, ದಲಿತರಿಗಾಗಿ ನೀವು ಮಾಡಿದ್ದೇನು ? : ಬಿಜೆಪಿ ಸಂಸದನ ಪ್ರಶ್ನೆ
ಹೊಸದಿಲ್ಲಿ, ಎ. 8: ದಲಿತರಿಗಾಗಿ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಆಪಾದಿಸುವ ಮೂಲಕ ಉತ್ತರ ಪ್ರದೇಶ ಬಿಜೆಪಿ ಸಂಸದ ಯಶವಂತ್ ಸಿಂಗ್ ಮೋದಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.
ದಲಿತರನ್ನು ಸಂರಕ್ಷಿಸುವ ಕಾನೂನನ್ನು ದುರ್ಬಲಗೊಳಿಸುವ ಹುನ್ನಾರದ ವಿರುದ್ಧ ದಲಿತರ ಆಕ್ರೋಶ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದನ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.
"ನನ್ನಂಥ ದಲಿತ ಸಂಸದರೇ ಆಡಳಿತ ಪಕ್ಷದ ದೌರ್ಜನ್ಯಗಳ ಸಂತ್ರಸ್ತರಾಗುತ್ತಿದ್ದೇವೆ. ಸಮುದಾಯದ ಜನತೆಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
"ನಾನು ಚುನಾಯಿತನಾದಾಗ, ದಲಿತರಿಗೆ ಬಡ್ತಿ ನೀಡುವಂಥ ಮಸೂದೆ ತರುವಂತೆ ಒತ್ತಾಯಿಸುವ ಸಲುವಾಗಿ ನಿಮ್ಮನ್ನು ಭೇಟಿಯಾಗಿದ್ದೆ. ಪ್ರತಿ ದಿನ ಹಲವು ಸಂಘಟನೆಗಳು ಇಂಥ ಮನವಿ ಮಾಡುತ್ತಿವೆ. ಆದರೆ 30 ಕೋಟಿ ದಲಿತರ ಪೈಕಿ ಒಬ್ಬರಿಗಾದರೂ ನೆರವಾಗುವಂಥ ಯಾವ ಯೋಜನೆಗಳನ್ನೂ ನಿಮ್ಮ ಸರ್ಕಾರ ಜಾರಿಗೆ ತಂದಿಲ್ಲ ಎಂದು ಸಂಸದ, ಮೋದಿಯವರಿಗೆ ಬರೆದ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ಯಶವಂತ್ ಸಿಂಗ್ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವೀಧರ. "ದಲಿತನಾಗಿ ನಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ನಾನು ಮೀಸಲಾತಿಯ ಕಾರಣದಿಂದಷ್ಟೇ ಸಂಸದನಾಗಿದ್ದೇನೆ" ಎಂದು ವಿವರಿಸಿದ್ದಾರೆ.