‘ಭಾರತ್ ಬಂದ್’ ನಂತರ ದೇಶಾದ್ಯಂತ ದಲಿತರಿಗೆ ಕಿರುಕುಳ ಹೆಚ್ಚಿದೆ: ಬಿಜೆಪಿ ಸಂಸದನ ಆರೋಪ
ಹೊಸದಿಲ್ಲಿ, ಎ.8: ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ನಡೆದ ‘ಭಾರತ್ ಬಂದ್’ ನಂತರ ದೇಶಾದ್ಯಂತ ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಆರೋಪಿಸಿದ್ದಾರೆ.
“ಎಪ್ರಿಲ್ 2ರ ಬಂದ್ ನಲ್ಲಿ ಭಾಗವಹಿಸಿದ್ದ ದಲಿತರನ್ನು ಗುರಿಯಾಗಿಸಲಾಗುತ್ತಿದೆ. ಕಿರುಕುಳ ನೀಡಲಾಗುತ್ತಿದೆ ಎನ್ನುವ ವರದಿಗಳಿವೆ. ಇದು ನಿಲ್ಲಬೇಕು. ಭಾರತ್ ಬಂದ್ ನಂತರ ದೇಶಾದ್ಯಂತ ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ. ಬಾರ್ಮರ್, ಜಾಲೋರ್, ಜೈಪುರ, ಗ್ವಾಲಿಯರ್, ಮೀರತ್, ಬುಲಂದ್ ಶಹರ್, ಕರೋಲಿ ಹಾಗು ಇತರ ಭಾಗಗಳಿಂದ ನನಗೆ ಕರೆ ಬರುತ್ತಿದ್ದು, ಮೀಸಲಾತಿ ವಿರೋಧಿಗಳು ಮಾತ್ರವಲ್ಲದೆ, ಪೊಲೀಸರು ಕೂಡ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ” ಎಂದು ಉದಿತ್ ರಾಜ್ ಹೇಳಿದ್ದಾರೆ.
ಈ ಎಲ್ಲಾ ಸ್ಥಳಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸೇರಿವೆ. ಯಾವುದೇ ತಪ್ಪು ಮಾಡದಿದ್ದರೂ ಗ್ವಾಲಿಯರ್ ನಲ್ಲಿರುವ ದಲಿತ ಸಂಘಟನೆಯೊಂದರ ಕಾರ್ಯಕರ್ತನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಉದಿತ್ ಆರೋಪಿಸಿದ್ದಾರೆ.