ಸಾವಿನ ಮುನ್ನಾ ದಿನ ಹಲ್ಲೆಕೋರರ ಹೆಸರು ಹೇಳಿದ್ದ ಸಂತ್ರಸ್ತೆಯ ತಂದೆ
ಉ.ಪ್ರ. ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ
ಲಕ್ನೋ,ಎ.11: ಬಿಜೆಪಿ ಶಾಸಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು ಎನ್ನಲಾದ ಉನ್ನಾವೊ ಯುವತಿಯ ತಂದೆ ಸಾವಿನ ಮುನ್ನಾ ದಿನ ಹಲ್ಲೆಕೋರರ ಹೆಸರು ಬಹಿರಂಗಪಡಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ಸಹೋದರ ಹಲ್ಲೆ ಮಾಡಿದ್ದಾಗಿ ಯುವತಿಯ ತಂದೆ ಹೇಳಿದ್ದರು. ಬಳಿಕ ಸೋಮವಾರ ಅವರು ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.
ಕಳೆದ ಜೂನ್ನಲ್ಲಿ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಅವರ ಸಹೋದರನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು ಎನ್ನಲಾದ ಸಂತ್ರಸ್ತ ಯುವತಿಗೆ ನ್ಯಾಯ ಪಡೆಯುವ ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಯುವತಿ, ಶಾಸಕರ ವಿರುದ್ಧ ನೀಡಿದ ದೂರು ಹಿಂದಕ್ಕೆ ಪಡೆಯಲು ತಂದೆ ನಿರಾಕರಿಸಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ. ರವಿವಾರ ಯುವತಿ, ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.
ಇದೇ ದಿನ 55 ವರ್ಷದ ಈಕೆಯ ತಂದೆಯ ಆರೋಗ್ಯ ಸ್ಥಿತಿ ಉಲ್ಬಣಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಪ್ರಿಲ್ 3ರಂದು ಜೈಲಿಗೆ ಕಳುಹಿಸುವ ಮುನ್ನ ವೈದ್ಯಕೀಯ ತಪಾಸಣೆ ವೇಳೆ, ದಾಳಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ಶಾಸಕರ ಸಹೋದರ ಅತುಲ್ ಸಿಂಗ್ ಹಲ್ಲೆ ಮಾಡಿದ್ದಾನೆ. ಆತ ಹೊಡೆಯುತ್ತಲೇ ಇದ್ದರೂ, ಯಾರೂ ರಕ್ಷಿಸಲಿಲ್ಲ.ಪೊಲೀಸರೂ ಅಲ್ಲೇ ನಿಂತಿದ್ದರು. ಅವರೂ ಏನೂ ಮಾಡಲಿಲ್ಲ" ಎಂದು ಮುಖ ಹಾಗೂ ಎದೆಯಲ್ಲಿ ಗಾಯದ ಗುರುತುಗಳಿರುವ ತಂದೆ ವಿವರಿಸಿದ್ದರು.
ರಕ್ತದಲ್ಲಿ ವಿಷ ಸೇರಿದ್ದು ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಿದ್ದರೂ, 14 ಗಂಭೀರ ಗಾಯಗಳಿದ್ದುದನ್ನು ವಿವರಿಸಲಾಗಿದೆ.