ಕತುವಾ ರೇಪ್ ಸಂತ್ರಸ್ತೆಯ ಹೆಸರನ್ನು ಫೇಸ್ ಬುಕ್ , ವಾಟ್ಸಾಪ್ ನಲ್ಲಿ ಬರೆಯುವ ಮುನ್ನ ಇದನ್ನು ಓದಿ
ನಿರ್ಲಕ್ಷಿಸಿದರೆ ದೊಡ್ಡ ಬೆಲೆ ತೆರಬೇಕಾದೀತು
ಹೊಸದಿಲ್ಲಿ,ಎ.18: ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂತ್ರಸ್ತೆ ಎಂಟರ ಹರೆಯದ ಬಾಲಕಿಯ ಗುರುತನ್ನು ಬಹಿರಂಗಗೊಳಿಸಿದ್ದಕ್ಕಾಗಿ ನೋಟಿಸ್ಗಳನ್ನು ಸ್ವೀಕರಿಸಿದ್ದ ಮಾಧ್ಯಮ ಸಂಸ್ಥೆಗಳು ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯದ ಕ್ಷಮೆಯನ್ನು ಯಾಚಿಸಿವೆ. ಮಾಧ್ಯಮ ಸಂಸ್ಥೆಗಳು ಮಾಡಿದ ತಪ್ಪಿಗಾಗಿ ತಲಾ ಹತ್ತು ಲಕ್ಷ ರೂ.ದಂಡವನ್ನು ವಿಧಿಸಿದ ಪ್ರಭಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ನ್ಯಾ.ಸಿ.ಹರಿಶಂಕರ ಅವರ ಪೀಠವು, ಈ ಮೊತ್ತವನ್ನು ಜಮ್ಮು-ಕಾಶ್ಮೀರ ಸಂತ್ರಸ್ತರ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಆದೇಶಿಸಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಗುರುತನ್ನು ಬಹಿರಂಗಗೊಳಿಸುವವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದೂ ಪೀಠವು ಎಚ್ಚರಿಕೆ ನೀಡಿದೆ.
ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಲು ಕಾನೂನಿನ ಬಗ್ಗೆ ಮಾಧ್ಯಮಸಂಸ್ಥೆಗಳ ನಿರ್ಲಕ್ಷ ಮತ್ತು ಆಕೆ ಮೃತಪಟ್ಟಿರುವುದರಿಂದ ಹೆಸರನ್ನು ಬಹಿರಂಗಗೊಳಿಸಬಹುದು ಎಂಬ ತಪ್ಪುಗ್ರಹಿಕೆ ಕಾರಣವಾಗಿತ್ತು ಎಂದು ಅವುಗಳನ್ನು ಪ್ರತಿನಿಧಿಸಿದ್ದ ವಕೀಲರು ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.
ಲೈಂಗಿಕ ಅಪರಾಧಗಳ ಬಲಿಪಶುಗಳ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನು ಮತ್ತು ಅವರ ಗುರುತು ಬಹಿರಂಗಗೊಳಿಸಿದರೆ ಎದುರಿಸಬೇಕಾದ ದಂಡನೆಯ ಕುರಿತು ವ್ಯಾಪಕ ಮತ್ತು ನಿರಂತರ ಪ್ರಚಾರ ನೀಡುವಂತೆಯೂ ಪೀಠವು ಆದೇಶಿಸಿತು.
ದಂಡದ ಹಣವನ್ನು ಒಂದು ವಾರದೊಳಗೆ ಉಚ್ಚ ನ್ಯಾಯಾಲಯದ ರಜಿಸ್ಟ್ರಾರ್ ಜನರಲ್ ಅವರಿಗೆ ಸಲ್ಲಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ತಾಕೀತು ಮಾಡಿದ ಪೀಠವು,ಮುಂದಿನ ವಿಚಾರಣೆಯನ್ನು ಎ.25ಕ್ಕೆ ನಿಗದಿಗೊಳಿಸಿತು.