ಕೇರಳ: ಹರತಾಳಕ್ಕೆ ಕರೆ ನೀಡಿದ ಕಿಡಿಗೇಡಿಗಳಿಗೆ ಸಂಘ ಪರಿವಾರದ ಸಂಪರ್ಕ?
ತಿರುವನಂತಪುರಂ, ಎ.21: ಕಾಶ್ಮೀರದ ಕಥುವಾದಲ್ಲಿ 8ರ ಹರೆಯದ ಬಾಲಕಿಯ ಮೇಲೆ ನಡೆದ ಅಮಾನುಷ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಎಪ್ರಿಲ್ 16ರಂದು ಕೇರಳ ರಾಜ್ಯದಾದ್ಯಂತ ಹರತಾಳಕ್ಕೆ ಕರೆ ನೀಡಲಾಗಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ತೀವ್ರಗತಿಯಲ್ಲಿ ಪ್ರಸಾರವಾಗಿತ್ತು. ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷ ಹರತಾಳಕ್ಕೆ ಕರೆ ನೀಡಿರಲಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಬಂದ ಕೀಟಲೆಯ ಸಂದೇಶ ಒಬ್ಬರಿಂದ ಒಬ್ಬರಿಗೆ ಪ್ರಸಾರವಾಗಿದೆ. ಸಂದೇಶದ ಸತ್ಯಾಸತ್ಯತೆ ಪರಿಶೀಲಿಸದೆ ಜನತೆ ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಇದೊಂದು ಕೀಟಲೆಯ ಸಂದೇಶ ಎಂಬುದು ಆ ಬಳಿಕ ತಿಳಿದು ಬಂದಿತ್ತು. ಸಂದೇಶದ ಮೂಲದ ಬಗ್ಗೆ ತನಿಖೆ ನಡೆಸಿದ ಪೊಲೀಸರು ದಕ್ಷಿಣ ಕೇರಳದ ಕೊಲ್ಲಂ ಹಾಗೂ ಕಿಳಿಮನೂರ್ನಿಂದ ಐವರನ್ನು ವಶಕ್ಕೆ ಪಡೆದಿದ್ದಾರೆ.
ಇವರಲ್ಲಿ ಇಬ್ಬರು ಸಂಘಪರಿವಾರದ ಸಕ್ರಿಯ ಕಾರ್ಯಕರ್ತರು ಎನ್ನಲಾಗಿದೆ. ಮತ್ತೊಬ್ಬ ಮಾಜಿ ಆರೆಸ್ಸೆಸ್ ಕಾರ್ಯಕರ್ತ. ಪೊಲೀಸರ ಪ್ರಕಾರ ಇವರು ‘ವಾಯ್ಸ್ ಆಫ್ ಟ್ರುಥ್’ ಎಂಬ ವಾಟ್ಸಾಪ್ ಗುಂಪು ರಚಿಸಿಕೊಂಡಿದ್ದಾರೆ. ಬಳಿಕ ರಾಜ್ಯದಾದ್ಯಂತ ಹಲವು ಉಪಗುಂಪುಗಳು ರಚನೆಯಾಗಿವೆ. ಇಂತಹ ಒಂದು ಗುಂಪಿನ ಅಡ್ಮಿನ್ ಆಗಿರುವ 16ರ ಹರೆಯದ, 10ನೇ ತರಗತಿ ವಿದ್ಯಾರ್ಥಿ ಎಂದು ಪೊಲೀಸರು ಗುರುತಿಸಿದ್ದಾರೆ. ಬಂಧಿತರನ್ನು ಮಲಪ್ಪುರಂ ಜಿಲ್ಲಾ ಪೊಲೀಸರು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹರತಾಳದ ಮೂಲವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುಪ್ತಚರ ವಿಭಾಗದವರಿಗೂ ಯಾವುದೇ ಮಾಹಿತಿಯಿಲ್ಲ. ಈ ಮಧ್ಯೆ, ರಾಜ್ಯ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗವು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನೀಡಿದ ವರದಿಯಲ್ಲಿ ಕೆಲವು ಸಂಘಟನೆ ಮತ್ತು ವ್ಯಕ್ತಿಗಳು ಹರತಾಳಕ್ಕೆ ಕರೆ ನೀಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಮಾಧ್ಯಮಗಳ ವರದಿಯನ್ನು ಉನ್ನತ ಪೊಲೀಸ್ ಅಧಿಕಾರಿಗಳು ಸಮರ್ಥಿಸಿಲ್ಲ. ಆದರೆ ಇಂತಹ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ. ಈ ಕೀಟಲೆಯ ಸಂದೇಶದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿದ ಕೆಲವರು ಅಲ್ಲಲ್ಲಿ ರಸ್ತೆ ತಡೆ ನಡೆಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದರು. ಪ್ರತಿಭಟನಾಕಾರರು ಕಲ್ಲೆಸೆತ ನಡೆಸಿದ್ದರಿಂದ ಸರಕಾರಿ ಬಸ್ಸುಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು ಹಾಗೂ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.