ಇಶ್ರತ್ ಜಹಾನ್ ಪ್ರಕರಣ: ಆರೋಪ ಕೈಬಿಡುವಂತೆ ವಂಝಾರ, ಅಮೀನ್ ಮಾಡಿದ ಮನವಿ ವಿರೋಧಿಸಿದ ಸಿಬಿಐ
ಹೊಸದಿಲ್ಲಿ, ಎ.27: ತಮ್ಮ ವಿರುದ್ಧ 2004ರ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಹೊರಿಸಲಾದ ಆರೋಪಗಳನ್ನು ಕೈಬಿಡಬೇಕೆಂದು ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರ ಹಾಗೂ ಮಾಜಿ ಎಸ್ಪಿ ಎನ್.ಕೆ.ಅಮೀನ್ ಮಾಡಿರುವ ಅಪೀಲನ್ನು ಸಿಬಿಐ ವಿರೋಧಿಸಿದೆಯಲ್ಲದೆ ಇಬ್ಬರ ವಿರುದ್ಧವೂ ತನ್ನ ಬಳಿ ಸಾಕಷ್ಟು ಸಾಕ್ಷ್ಯವಿದೆ ಎಂದು ಹೇಳಿದೆ.
ಎಪ್ರಿಲ್ 14ರಂದು ಇಬ್ಬರು ಅಧಿಕಾರಿಗಳ ಅಪೀಲಿನ ಮೇಲಿನ ವಿಚಾರಣೆಯನ್ನು ಅಹ್ಮದಾಬಾದ್ ನ ವಿಶೇಷ ಸಿಬಿಐ ನ್ಯಾಯಾಲಯ ನಡೆಸಲಿತ್ತಾದರೂ ತನ್ನ ಉತ್ತರ ನೀಡಲು ಸಿಬಿಐ ಎರಡು ವಾರಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿತ್ತು.
ತನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ತನ್ನ ಅಪೀಲಿನಲ್ಲಿ ವಂಝಾರ ಹೇಳಿದ್ದರಲ್ಲದೆ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವನ್ನು ಕೆಳಗಿಳಿಸಲು ಹೀಗೆ ಮಾಡಲಾಗಿತ್ತು. ಆಗಿನ ಕೇಂದ್ರ ಸರಕಾರ (ಯುಪಿಎ) ಈ ಸಂಚನ್ನು ನಡೆಸಿತ್ತೆಂದೂ ಹೇಳಿಕೊಂಡಿದ್ದರು
ನಿವೃತ್ತ ಡಿಜಿಪಿ ಪಿ.ಪಿ.ಪಾಂಡೆ ವಿರುದ್ಧದ ಆರೋಪಗಳನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ವಂಝಾರ ಕೂಡ ಆರೋಪ ಕೈಬಿಡುವಂತೆ ಮನವಿ ಮಾಡಿದ್ದರು.
ಅತ್ತ ಅಮೀನ್ ತಮ್ಮ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ಫೊರೆನ್ಸಿಕ್ ಸಾಕ್ಷ್ಯವಿಲ್ಲ ಎಂದಿದ್ದರು.
ಎನ್ಕೌಂಟರ್ ನಡೆದಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಅಮೀನ್ ಒಬ್ಬರಾಗಿದ್ದರು. ಆ ಸಂದರ್ಭ ಅವರು ಕೂಡ ಗುಂಡು ಹಾರಿಸಿದ್ದರೆನ್ನಲಾಗಿದೆ.