ಉ.ಪ್ರದೇಶ, ರಾಜಸ್ಥಾನದಲ್ಲಿ ಧೂಳು ಬಿರುಗಾಳಿ: ಮೃತರ ಸಂಖ್ಯೆ 109ಕ್ಕೇರಿಕೆ
ಹೊಸದಿಲ್ಲಿ, ಮೇ.3: ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬುಧವಾರ ಬೀಸಿದ ಧೂಳು ಬಿರುಗಾಳಿಗೆ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಪಂಜಾಬ್, ಹರ್ಯಾಣ ಮತ್ತು ಮಧ್ಯಪ್ರದೇಶದಲ್ಲಿ ಧೂಳು ಬಿರುಗಾಳಿಯು ವಿನಾಶವನ್ನು ಸೃಷ್ಟಿಸಿದೆ.
ಬಿರುಗಾಳಿ ಅಪ್ಪಳಿಸಿದ ಸಂದರ್ಭದಲ್ಲಿ ಹೆಚ್ಚಿನ ಜನರು ಮಲಗಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳಿಗೆ ಸಿಡಿಲು ಬಡಿದ ಕಾರಣ ಗೋಡೆಗಳು ಕುಸಿದು ಮಲಗಿದ್ದವರ ಮೇಲೆ ಬಿದ್ದ ಪರಿಣಾಮ ಹಲವು ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಬೇಸಿಗೆಯ ಸಮಯದಲ್ಲಿ ಧೂಳಿನ ಬಿರುಗಾಳಿಯು ಸಾಮಾನ್ಯವಾಗಿದ್ದರೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿರುವುದು ಇದೇ ಮೊದಲು. ಬಿರುಗಾಳಿ ಸಾಗಿದ ದಾರಿಯಲ್ಲಿ ಬೃಹತ್ ಮರಗಳು ಬುಡಸಮೇತ ಧರೆಗುರುಳಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಜನರು ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ. ಮಣ್ಣಿನ ಮನೆಗಳು ಧರಾಶಾಯಿಯಾಗಿದ್ದು ಅವಶೇಷಗಳಡಿಯಲ್ಲಿ ಹಲವರು ಸಿಲುಕಿರಬಹುದು ಎಂದು ರಕ್ಷಣಾ ತಂಡ ಸಂಶಯ ವ್ಯಕ್ತಪಡಿಸಿದೆ.
ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಉತ್ತರ ಪ್ರದೇಶದಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ಸರಕಾರ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ಪರಿಹಾರ ಘೋಷಿಸಿದೆ. ಹೊಸದಿಲ್ಲಿಯಲ್ಲೂ ಬುಧವಾರ ರಾತ್ರಿ ಧೂಳು ಬಿರುಗಾಳಿ ಬೀಸಿದ್ದು, ಧಾರಾಕಾರ ಮಳೆ ಸುರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿತ್ತು. ಮುಂದಿನ ಎರಡು ದಿನಗಳ ಕಾಲ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.