ಆರೋಪಿಗಳನ್ನು ಗಲ್ಲಿಗೇರಿಸಿ ಇಲ್ಲವೇ ನಮಗೆ ಗುಂಡಿಕ್ಕಿ: ಸಂತ್ರಸ್ತ ಬಾಲಕಿಯ ತಾಯಿ
ಕಥುವಾ ಅತ್ಯಾಚಾರ, ಕೊಲೆ ಪ್ರಕರಣ
ಕಥುವಾ, ಮೇ 6: “ಇಲ್ಲಿ ಒಂದು ವೇಳೆ ನ್ಯಾಯವಿಲ್ಲದಿದ್ದರೆ ನಮ್ಮೆಲ್ಲರನ್ನೂ ಗುಂಡಿಕ್ಕಿ ಕೊಲ್ಲಿ, ಆರೋಪಿಗಳನ್ನು ಗಲ್ಲಿಗೇರಿಸಿ ಇಲ್ಲವೇ ನಮಗೆ ಗುಂಡಿಕ್ಕಿ” ಇದು ಕಥುವಾದಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ, ಹತ್ಯೆಗೀಡಾದ ಬಾಲಕಿಯ ತಾಯಿಯ ಮಾತುಗಳು.
“ಅವರು ಬಿಡುಗಡೆಗೊಂಡರೆ ನಮ್ಮನ್ನು ಕೊಲ್ಲಬಹುದು. ನಾಲ್ಕು ಗ್ರಾಮಗಳ ಜನರು ನಮ್ಮ ಹಿಂದೆ ಬಿದ್ದಿದ್ದಾರೆ. ನಾವು ಕೇವಲ ನಾಲ್ಕು ಮಂದಿಯಿದ್ದೇವೆ…. ಎಲ್ಲವೂ ಮುಗಿಯಿತು; ನಮ್ಮ ಮನೆ, ನಮ್ಮ ಒಟ್ಟು ಆಸ್ತಿ ಎಲ್ಲವೂ ನಾಶವಾಗಿ ಹೋಯಿತು”ಎಂದು ಬಾಲಕಿಯ ತಾಯಿ ಮಾಧ್ಯಮದೊಂದಿಗಿನ ಸಂದರ್ಶನದಲ್ಲಿ ಹೇಳಿದರು.
ತನ್ನ ಕುಟುಂಬಕ್ಕೆ ಸುರಕ್ಷತೆಯಿಲ್ಲದೆ ಇರುವುದರಿಂದ ಪ್ರಕರಣದ ತನಿಖೆಯನ್ನು ಜಮ್ಮು ಮತ್ತು ಕಾಶ್ಮೀರದ ಹೊರಗೆ ಸ್ಥಳಾಂತರಿಸಬೇಕು ಎಂದು ಬಾಲಕಿಯ ತಂದೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದರು.
ಸಿಬಿಐ ತನಿಖೆಗೆ ಒಪ್ಪಿಗೆ ಸೂಚಿಸಲು ಸ್ಥಳೀಯ ರಾಜಕಾರಣಿಗಳು ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸುತ್ತಾರೆ. ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಸಿಬಿಐ ತನಿಖೆಗೆ ಒಪ್ಪುವಂತೆ ಒತ್ತಡ ಹೇರಲಾಗುತ್ತಿದೆ ಎನ್ನುವುದು ಅವರ ಆರೋಪ.