ಸಿಜೆಐ ಪದಚ್ಯುತಿ ನಿಲುವಳಿ ನೋಟಿಸ್ ತಿರಸ್ಕರಿಸಿದ ಉಪರಾಷ್ಟ್ರಪತಿ ಕ್ರಮ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಕಾಂಗ್ರೆಸ್
ಹೊಸದಿಲ್ಲಿ,ಮೇ.7 : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪದಚ್ಯುತಿ ನಿಲುವಳಿ ನೋಟಿಸ್ ಅನ್ನು ತಿರಸ್ಕರಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ಉಪರಾಷ್ಟ್ರಪತಿಯ ನಿರ್ಧಾರ ಅಕ್ರಮ ಮತ್ತು ಏಕಪಕ್ಷೀಯವಾಗಿದೆ ಎಂದು ಕಾಂಗ್ರೆಸ್ ಬಣ್ಣಿಸಿದೆ.
ರಾಜ್ಯಸಭಾ ಸಭಾಪತಿಯೂ ಆಗಿರುವ ನಾಯ್ಡು ಅವರು ಈ ನಿಲುವಳಿಯನ್ನು ತಿರಸ್ಕರಿಸಲು ನೀಡಿರುವ ಯಾವುದೇ ಕಾರಣವು ಸಮರ್ಪಕವೂ ಆಗಿಲ್ಲ ಕಾನೂನಾತ್ಮಕವಾಗಿಯೂ ಸಮರ್ಥನೀಯವಲ್ಲ. ಸಂವಿಧಾನದ ನಿಬಂಧನೆಗಳಿಗೆ ಅವರ ನಿರ್ಧಾರ ತಕ್ಕುದಾಗಿಲ್ಲ ಎಂದೂ ಕಾಂಗ್ರೆಸ್ ತನ್ನ ಅಪೀಲಿನಲ್ಲಿ ಹೇಳಿದೆ.
ಸುಮಾರು 60ರಷ್ಟು ಕಾಂಗ್ರೆಸ್ ಸಂಸದರು ಕಳೆದ ತಿಂಗಳು ಜಸ್ಟಿಸ್ ಮಿಶ್ರಾ ಅವರ ಪದಚ್ಯುತಿ ನಿಲುವಳಿ ನೋಟಿಸ್ ಅನ್ನು ರಾಜ್ಯಸಭಾ ಸಭಾಪತಿಗೆ ಸಲ್ಲಿಸಿದ್ದರಲ್ಲದೆ ಈ ನೋಟಿಸ್ ಜಾರಿಗೊಳಿಸಲು ಐದು ಕಾರಣಗಳನ್ನೂ ನೀಡಿದ್ದರು.
ಸೂಕ್ಷ್ಮವೆಂದು ತಿಳಿಯಲಾದ ಪ್ರಕರಣಗಳನ್ನು ಆಯ್ದ ನ್ಯಾಯಾಧೀಶರ ಪೀಠಕ್ಕೆ ನೀಡುವುದು ಕೂಡ ಕಾಂಗ್ರೆಸ್ ಉಲ್ಲೇಖಿಸಿದ ಕಾರಣಗಳಲ್ಲೊಂದಾಗಿತ್ತು.
ಅಸಮರ್ಪಕ ನಡವಳಿಕೆ ಅಥವಾ ಅಸಾಮರ್ಥ್ಯ ಸಾಬೀತಾದಲ್ಲಿ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸಬಹುದಾಗಿದೆ.