ಮೇ.16ಕ್ಕೆ ಕಥುವಾ ಸಾಕ್ಷಿಗಳ ಮನವಿ ವಿಚಾರಣೆ
ಹೊಸದಿಲ್ಲಿ, ಮೇ 16: ರಾಜ್ಯ ಪೊಲೀಸರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಥುವಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಮೂವರು ಸಾಕ್ಷಿಗಳು ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಮೇ 16ರಂದು ವಿಚಾರಣೆ ನಡೆಸಲಿದೆ. ಈ ಪ್ರಕರಣದ ಬಾಲಾರೋಪಿಯ ಕಾಲೇಜು ಗೆಳೆಯರಾಗಿರುವ ಶಾಹಿಲ್ ಶರ್ಮಾ ಹಾಗೂ ಇತರ ಇಬ್ಬರು ಸಲ್ಲಿಸಿದ ಮನವಿಯನ್ನು ಮೇ 16ರಂದು ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಸೋಮವಾರ ಹೇಳಿದೆ.
ನಾವು ಈಗಾಗಲೇ ಪೊಲೀಸರು ಹಾಗೂ ದಂಡಾಧಿಕಾರಿ ಮುಂದೆ ಹೇಳಿಕೆ ದಾಖಲಿಸಿದ್ದೇವೆ ಎಂದು ಮನವಿಯಲ್ಲಿ ಹೇಳಲಾಗಿದೆ. ದಂಡಾಧಿಕಾರಿ ಮುಂದೆ ಹೇಳಿಕೆ ನೀಡಿರುವ ಮೂವರು ಸಾಕ್ಷಿಗಳು, ಪೊಲೀಸರ ಒತ್ತಾಯದಿಂದ ನಾವು ಹೇಳಿಕೆ ನೀಡಿದ್ದೇವೆ ಎಂದಿದ್ದಾರೆ. ಮರು ಹಾಜರಾಗುವಂತೆ ಹಾಗೂ ಹೇಳಿಕೆಗಳನ್ನು ಮರು ದಾಖಲಿಸುವಂತೆ ಪೊಲೀಸರು ನಮಗೆ ತಿಳಿಸಿದ್ದಾರೆ ಹಾಗೂ ತಮ್ಮ ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸೋಮವಾರ ಸಲ್ಲಿಸಿದ ದೂರಿನಲ್ಲಿ ಸಾಕ್ಷಿಗಳು ಆರೋಪಿಸಿದ್ದಾರೆ.