ಹಿ.ಪ್ರದೇಶ ಮಾಜಿ ಮುಖ್ಯಮಂತ್ರಿ, ಮಗನ ವಿರುದ್ಧ ಪ್ರಕರಣ ದಾಖಲು
ವೀರಭದ್ರ ಸಿಂಗ್
ಶಿಮ್ಲಾ, ಮೇ 17: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಬಂಧಿಗೆ ಸೇರಿದ ಐತಿಹಾಸಿಕ ಮಹತ್ವದ ಕಟ್ಟಡದ ಒಳಗೆ ಅಕ್ರಮ ಪ್ರವೇಶ ಮಾಡಿದ ಆರೋಪದಲ್ಲಿ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಪುತ್ರ ವಿಕ್ರಮಾಧಿತ್ಯ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಮಪುರದಲ್ಲಿರುವ ಪದಮ್ ಪ್ಯಾಲೆಸ್ ಒಳಗೆ ಅಕ್ರಮವಾಗಿ ಪ್ರವೇಶ ಮಾಡಲು ತಂದೆ ಪುತ್ರನಿಗೆ ಸಹಾಯ ಮಾಡಿದ ಆರೋಪದಲ್ಲಿ ಮಾಜಿ ಪಿಡಬ್ಲೂಡಿ ಮುಖ್ಯ ಇಂಜಿನಿಯರ್ ಸ್ವಾಮಿ ಪ್ರಕಾಶ್ ನೇಗಿ ಹಾಗೂ ಇತರರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ವೀರಭದ್ರ ಅವರ ಸೋದರಳಿಯ ರಾಜೇಶ್ವರ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಪದಮ್ ಪ್ಯಾಲೆಸ್ನ ಬೀಗವನ್ನು ಮುರಿದು ಅದರೊಳಗಿರುವ ಅಮೂಲ್ಯ ಮತ್ತು ಕರಕುಶಲ ವಸ್ತುಗಳನ್ನು ಹೊರಗೆಸೆಯುವಂತೆ ವೀರಭದ್ರ ಸಿಂಗ್ ತಮ್ಮ ಜನರಿಗೆ ಆದೇಶ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ರಾಜೇಶ್ವರ್ ಬಳಿ ನೌಕರನಾಗಿ ದುಡಿಯುತ್ತಿರುವ ಮಸ್ತ್ ರಾಮ್ ಎಂಬವರು, ಮೇ 9ರಂದು ಮಾಜಿ ಮುಖ್ಯಮಂತ್ರಿ ಮತ್ತು ಅವರ ಜನರು ನಾವು ಅರಮನೆಯತ್ತ ತೆರಳುತ್ತಿದ್ದಾಗ ನಮ್ಮನ್ನು ತಡೆದಿದ್ದಾರೆ ಮತ್ತು ಅರಮನೆಯ ಅಮೂಲ್ಯ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ನಂತರ ಅರಮನೆಯೊಳಗಿದ್ದ ಮೂವತ್ತು ಸಾವಿರ ರೂ. ನಾಪತ್ತೆಯಾಗಿದೆ ಎಂದು ರಾಮ್ ಪೊಲೀಸರಿಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ನನ್ನನ್ನು ಮನೆಗೆ ಕರೆಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿಗಳು ನನಗೆ ಜೀವಬೆದರಿಕೆ ಕೂಡಾ ಹಾಕಿದ್ದಾರೆ ಎಂದು ರಾಮ್ ಆರೋಪಿಸಿದ್ದಾರೆ. ನನ್ನ ಅಜ್ಜ ಅರಮನೆಯನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿದ ನಂತರ ಈ ಬಗ್ಗೆ ತಕರಾರು ಎದ್ದಿತು. ಇದು ಕೌಟುಂಬಿಕ ವಿಷಯವಾಗಿದ್ದು ಶಾಂತಿಯುತವಾಗಿ ಪರಿಹರಿಸಬಹುದಿತ್ತು. ಆದರೆ ಈ ಘಟನೆಯು ನಾನು ಪೊಲೀಸರಿಗೆ ದೂರು ನೀಡುವಂತೆ ಮಾಡಿದೆ ಎಂದು ರಾಜೇಶ್ವರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.