ಕೊಲಿಜಿಯಂ ವ್ಯವಸ್ಥೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ: ಕೇಂದ್ರ ಸಚಿವ ಕುಶ್ವಾಹ
ಹೊಸದಿಲ್ಲಿ,ಮೇ 21: ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಆಯ್ಕೆಗಾಗಿರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಮತ್ತು ಅದು ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಕೇಂದ್ರ ಸಹಾಯಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಉಪೇಂದ್ರ ಕುಶ್ವಾಹ ಅವರು ಸೋಮವಾರ ಇಲ್ಲಿ ಹೇಳಿದರು. ಉನ್ನತ ನ್ಯಾಯಾಂಗದಲ್ಲಿ ಎಸ್ಸಿ,ಎಸ್ಟಿ ಮತ್ತು ದಲಿತ ಸಮುದಾಯಗಳಿಗೆ ಸೇರಿದ ಜನರ ಹೆಚ್ಚಿನ ಪ್ರಾತಿನಿಧ್ಯಕ್ಕೆ ಅವರು ಕರೆ ನೀಡಿದರು.
ಉನ್ನತ ನ್ಯಾಯಾಂಗದಲ್ಲಿ ನೇಮಕಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತಿಲ್ಲ ಎಂದ ಅವರು,ಎಸ್ಸಿ/ಎಸ್ಟಿಗಳು ಮತ್ತು ದಲಿತರಿಗೆ ಮತ್ತು ನ್ಯಾಯಾಧೀಶರಾಗಲು ಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಬಾಗಿಲುಗಳು ಮುಚ್ಚಿವೆ. ಈ ಬಾಗಿಲುಗಳು ತೆರೆದುಕೊಳ್ಳಬೇಕು ಎಂದು ನಾವು ಬಯಸಿದ್ದೇವೆ ಎಂದು ಬಿಜೆಪಿಯ ಮಿತ್ರಪಕ್ಷ ಬಿಹಾರದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ ನಾಯಕರೂ ಆದ ಕುಶ್ವಾಹ ಹೇಳಿದರು.
ಈ ವಿಷಯದಲ್ಲಿ ಅಭಿಯಾನವೊಂದಕ್ಕೆ ಚಾಲನೆ ನೀಡಿದ ಅವರು,ಕೊಲಿಜಿಯಂ ವ್ಯವಸ್ಥೆಯಡಿ ಜನರು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದಾರೆ ಮತ್ತು ನ್ಯಾಯಾಧೀಶರು ತಮ್ಮ ‘ಉತ್ತರಾಧಿಕಾರಿಗಳ’ ಆಯ್ಕೆಯ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಪ್ರಸ್ತಾಪಿಸಿದ ಅವರು,ಚಹಾ ಮಾರಾಟಗಾರನೋರ್ವ ಪ್ರಧಾನಿ ಮತ್ತು ಮೀನುಗಾರನ ಮಗ ರಾಷ್ಟ್ರಪತಿಯಾಗಲು ಸಾಧ್ಯವಿದ್ದರೆ ದುರ್ಬಲ ವರ್ಗಗಳನ್ನೇಕೆ ಅವರ ಹಕ್ಕುಗಳಿಂದ ವಂಚಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.
ಎನ್ಡಿಎ ಸರಕಾರವು ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ ಕಾಯ್ದೆಯನ್ನು ಅಂಗೀಕರಿಸಿತ್ತು,ಆದರೆ ಸರ್ವೋಚ್ಚ ನ್ಯಾಯಾಲಯವು ಅದನ್ನು ರದ್ದುಗೊಳಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.