ಪೆಟ್ರೋಲ್ ಬೆಲೆ 25 ರೂ. ಇಳಿಸಬಹುದು, ಆದರೆ ಕೇಂದ್ರ ಸರಕಾರ ಹಾಗೆ ಮಾಡದು: ಪಿ. ಚಿದಂಬರಂ
ಹೊಸದಿಲ್ಲಿ, ಮೇ 23: ಏರುತ್ತಿರುವ ಇಂಧನ ಬೆಲೆಗಳಿಂದಾಗಿ ಕೇಂದ್ರ ಸರಕಾರ ತೀವ್ರ ಟೀಕೆಗೆ ಗುರಿಯಾಗಿರುವಂತೆಯೇ ಪೆಟ್ರೋಲ್ ಬೆಲೆಗಳನ್ನು ಪ್ರತಿ ಲೀಟರ್ ಗೆ 25 ರೂ.ಗಳಷ್ಟು ಕಡಿತಗೊಳಿಸಬಹುದಾದರೂ ಸರಕಾರ ಹಾಗೆ ಮಾಡುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
"ಕಚ್ಛಾ ತೈಲ ಬೆಲೆ ಇಳಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದ ಕೇಂದ್ರ ಸರಕಾರ 15 ರೂ. ಗಳಿಸುತ್ತದೆ. ಕೇಂದ್ರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 10 ರೂ. ಹೆಚ್ಚುವರಿ ತೆರಿಗೆ ಕೂಡ ವಿಧಿಸುತ್ತಿದೆ. 25 ರೂ.ಗಳನ್ನು ಬೆಲೆ ಇಳಿಸಬಹುದಾದರೂ ಅವರು ಲೀಟರ್ ಗೆ ರೂ 1 ಅಥವಾ ರೂ 2ರಷ್ಟು ಕಡಿತಗೊಳಿಸಿ ಜನರನ್ನು ವಂಚಿಸುತ್ತಾರೆ,'' ಎಂದು ಸರಣಿ ಟ್ವೀಟ್ ಗಳ ಮೂಲಕ ಚಿದಂಬರಂ ಹೇಳಿದ್ದಾರೆ.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 19 ದಿನಗಳ ಕಾಲ ಪೆಟ್ರೋಲ್ ಬೆಲೆಯಲ್ಲಿ ಸ್ಥಿರತೆ ಕಾಣಿಸಿಕೊಂಡ ನಂತರ ಇದೀಗ ಇಂಧನ ಬೆಲೆ ಮತ್ತೆ ಏರಿಸಲಾಗಿದೆ. ಪೆಟ್ರೋಲ್ ಬೆಲೆ ರಾಜಧಾನಿಯಲ್ಲಿ ಲೀಟರ್ ಗೆ ರೂ 76.87 ಆಗಿದ್ದರೆ, ಡೀಸೆಲ್ ಬೆಲೆ ರೂ 68.08 ಆಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ 2.24ರಷ್ಟು ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ರೂ 2.15ರಷ್ಟು ಏರಿದೆ.