ಪ್ರವಾಸಿಗರೇ…. ಕೇರಳದ ಈ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಬೇಡಿ: ಸರಕಾರದ ಮನವಿ
ನಿಪಾಹ್ ವೈರಸ್ ಭೀತಿ
ತಿರುವನಂತಪುರ, ಮೇ 23: ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕೇರಳ ಸರಕಾರ, ರಾಜ್ಯದ ಉತ್ತರ ಜಿಲ್ಲೆಗಳಾದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರಿಗೆ ಭೇಟಿ ನೀಡದಂತೆ ಪ್ರವಾಸಿಗಳಲ್ಲಿ ವಿನಂತಿಸಿದೆ. ಪ್ರವಾಸಿಗರು ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡುವುದು ಸುರಕ್ಷಿತ. ಆದರೆ, ಹೆಚ್ಚುವರಿ ಎಚ್ಚರಿಕೆ ಅನುಸರಿಸಬೇಕು. ಈ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ರಾಜೀವ್ ಸದಾನಂದನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕೆಲವು ನಿಪಾಹ್ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಪ್ರಕರಣಗಳು ಒಂದೇ ಕುಟುಂಬದಲ್ಲಿ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಅತ್ಯಧಿಕ ಪ್ರಕರಣಗಳು ವರದಿಯಾಗಿರುವ ಕೋಝಿಕೋಡ್ನಲ್ಲಿ ಹಾಗೂ ನೆರೆಯ ಜಿಲ್ಲೆಗಳಾದ ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ನಿಪಾಹ್ ವೈರಸ್ ಸೋಂಕಿನ ಬಗ್ಗೆ ಸರಕಾರ ನಿಗಾ ವಹಿಸಿದೆ ಎಂದು ಅವರು ತಿಳಿಸಿದ್ದಾರೆ. ವರದಿಯಾಗಿರುವ ಪ್ರಕರಣಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆ ಪರಿಣಾಮಕಾರಿ ಹೆಜ್ಜೆಗಳನ್ನು ಇರಿಸಿದೆ. ಈ ವ್ಯಕ್ತಿಗಳ ಸಂಪರ್ಕವನ್ನು ಪತ್ತೆ ಹಚ್ಚುವ ಮೂಲಕ ನಿಗಾ ವಹಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಆ್ಯಂಟಿ ವೈರಲ್ 2,000 ರೆಬಾವಿರಿನ್ ಟ್ಯಾಬ್ಲೆಟ್ಗಳು ಕೋಝಿಕೋಡ್ಗೆ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ 8000 ಟ್ಯಾಬ್ಲೆಟ್ಗಳನ್ನು ಪೂರೈಕೆ ಮಾಡಲಾಗುವುದು ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ನಿಪಾಹ್ ವೈರಸ್ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಬಳಿಕ ಸೋಂಕಿಗೆ ಒಳಗಾಗಿ ಮೃತಪಟ್ಟ 31ರ ಹರೆಯದ ನರ್ಸ್ ಲಿನಿ ಪುದುಶ್ಶೇರಿ ಕುಟುಂಬಕ್ಕೆ ಕೇರಳ ಸರಕಾರ 20 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ. ಕೇರಳದಲ್ಲಿ ನೆಲೆಸುವುದಾದಲ್ಲಿ ಲಿನಿ ಅವರ ಪತಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಕೂಡ ಸರಕಾರ ಹೇಳಿದೆ. ಮೃತಪಟ್ಟ ಇತರರ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನವನ್ನು ಸರಕಾರ ಘೋಷಿಸಿದೆ.