ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ: ಬಿಜೆಪಿ, ಶಿವಸೇನೆಗೆ ತಲಾ ಎರಡು,ಎನ್ಸಿಪಿಗೆ ಒಂದು ಸ್ಥಾನ
ಮುಂಬೈ,ಮೇ 24: ಮಹಾರಾಷ್ಟ್ರ ವಿಧಾನ ಪರಿಷತ್ನ ಆರು ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗಾಗಿ ಸೋಮವಾರ ನಡೆದಿದ್ದ ದ್ವೈವಾರ್ಷಿಕ ಚುನಾವಣೆಗಳಲ್ಲಿ ಐದು ಕ್ಷೇತ್ರಗಳ ಮತಎಣಿಕೆ ಗುರುವಾರ ನಡೆದಿದ್ದು,ರಾಜ್ಯ ಸಚಿವ ಹಾಗೂ ಬಿಜೆಪಿ ನಾಯಕ ಪ್ರವೀಣ ಪೋತೆ ಅವರು ಅಮರಾವತಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದರೆ,ಶಿವಸೇನೆ ತಾನು ಸ್ಪರ್ಧಿಸಿದ್ದ ಮೂರು ಸ್ಥಾನಗಳ ಪೈಕಿ ಎರಡನ್ನು ಗೆದ್ದುಕೊಂಡಿದೆ.
ಚುನಾವಣೆಯಲ್ಲಿ ಆಡಳಿತ ಬಿಜೆಪಿಯು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ,ಪ್ರತಿಪಕ್ಷ ಕಾಂಗ್ರೆಸ್ ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ವಾರ್ಧಾ-ಚಂದ್ರಾಪುರ-ಗಡಚಿರೋಳಿ ಸ್ಥಳೀಯ ಸಂಸ್ಥೆಗಳ ಸ್ಥಾನವನ್ನೂ ಬಿಜೆಪಿ ಗೆದ್ದಿದ್ದರೆ,ಶಿವಸೇನೆಯು ನಾಸಿಕ್ ಮತ್ತು ಪರ್ಭನಿ-ಹಿಂಗೋಲಿ ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಯಗಡ-ರತ್ನಾಗಿರಿ-ಸಿಂಧುದುರ್ಗ ಸ್ಥಾನವನ್ನು ಎನ್ಸಿಪಿ ಉಳಿಸಿಕೊಂಡಿದೆ.
ಬೀಡ್ ಜಿಲ್ಲೆಯಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳ ಸದಸ್ಯರ ಅಮಾನತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣಾ ಆಯೋಗವು ಉಸ್ಮಾನಬಾದ್-ಬೀಡ್-ಲಾತೂರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತ ಎಣಿಕೆಯನ್ನು ಮುಂದೂಡಿದೆ.