ನಿವೃತ್ತ ಸೇನಾ ಮುಖ್ಯಸ್ಥರನ್ನು ಭೇಟಿಯಾದ ಅಮಿತ್ ಶಾ
ಬಿಜೆಪಿಯ ‘ಸಂಪರ್ಕದಿಂದ ಸಮರ್ಥನೆ’ ಕಾರ್ಯಕ್ರಮ
ಹೊಸದಿಲ್ಲಿ, ಮೇ 29: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಸಂಪರ್ಕದಿಂದ ಸಮರ್ಥನೆ ಕಾರ್ಯಕ್ರಮಕ್ಕೆ ಪಕ್ಷಾಧ್ಯಕ್ಷ ಅಮಿತ್ ಶಾ ಮಂಗಳವಾರ ಚಾಲನೆ ನೀಡಿದರು.
ನಿವೃತ್ತ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ರನ್ನು ಅವರ ದಿಲ್ಲಿ ಮಂದಿರ ಮಾರ್ಗ್ನಲ್ಲಿರುವ ನಿವಾಸದಲ್ಲಿ ಭೇಟಿಯಾಗುವ ಮೂಲಕ ಶಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮೋದಿ ಸರಕಾರದ ಸಾಧನೆಗಳನ್ನು ತಿಳಿಸುವ ಕೆಲವು ಸಣ್ಣ ಪುಸ್ತಕಗಳನ್ನು ಸುಹಾಗ್ಗೆ ನೀಡಿದರು.
ಈ ಕಾರ್ಯಕ್ರಮದಡಿ ಶಾ ವೈಯಕ್ತಿಕವಾಗಿ ಕನಿಷ್ಟ ಐವತ್ತು ಗಣ್ಯರನ್ನು ಭೇಟಿ ಮಾಡಲಿದ್ದು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತಾತ್ಮಕ ಮೈತ್ರಿಕೂಟದ ಸರಕಾರದ ಸಾಧನೆಗಳ ಬಗ್ಗೆ ತಿಳಿಸಲಿದ್ದಾರೆ. ಈ ಕಾರ್ಯಕ್ರಮವು, 2019ರ ಲೋಕಸಭಾ ಚುನಾವಣೆಗೂ ಮುನ್ನ ಗರಿಷ್ಠ ಸಂಖ್ಯೆಯಲ್ಲಿ ಜನರನ್ನು ಸಂಪರ್ಕಿಸುವ ಪಕ್ಷದ ಪ್ರಯತ್ನದ ಭಾಗವಾಗಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ 4,000 ಹಿರಿಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಒಂದು ಲಕ್ಷಕ್ಕೂ ಅಧಿಕ ಗಣ್ಯರನ್ನು ಭೇಟಿಯಾಗಿ ಮೋದಿ ಸರಕಾರದ ಸಾಧನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಕೂಡಾ ಈ ಅಭಿಯಾನದ ಭಾಗವಾಗಿದ್ದು ಈಗಾಗಲೇ ಉಜ್ವಲ ಯೋಜನೆ ಮತ್ತು ಮುದ್ರಾ ಯೋಜನೆಯ ಫಲಾನುಭವಿಗಳ ಜೊತೆ ನಮೋ ಆ್ಯಪ್ ಮೂಲಕ ಸಂವಾದ ನಡೆಸಿದ್ದಾರೆ.