ತೂತುಕುಡಿ ಆಸ್ಪತ್ರೆಯಲ್ಲಿ ಅತ್ಯಂತ ಮುಜುಗರದ ಪ್ರಶ್ನೆ ಎದುರಿಸಿದ ರಜಿನಿಕಾಂತ್ !
ತೂತುಕುಡಿ(ತ.ನಾ),ಮೇ 30: ಸ್ಟರ್ಲೈಟ್ ವಿರೋಧಿ ಪ್ರತಿಭಟನೆ ಸಂದರ್ಭ ಪೊಲೀಸ್ ಗೋಲಿಬಾರ್ನಲ್ಲಿ ಗಾಯಗೊಂಡವರನ್ನು ನೋಡಲು ಬುಧವಾರ ತೂತುಕುಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದ ನಟ ರಜನೀಕಾಂತ್ ತನ್ನ ಜೀವಮಾನದಲ್ಲಿಯೇ ಅತ್ಯಂತ ಮುಜುಗರವನ್ನುಂಟು ಮಾಡುವ ಪ್ರಶ್ನೆಯನ್ನು ಖಂಡಿತ ಊಹಿಸಿರಲಿಲ್ಲ. ಗಾಯಾಳು ಯುವಕನೋರ್ವ ‘ನೀವು ಯಾರು’ ಎಂದು ಪ್ರಶ್ನಿಸಿದಾಗ ರಜನಿ ದಂಗಾಗಿಬಿಟ್ಟಿದ್ದರು.
# ಇದಾದ ಬಳಿಕ ಹ್ಯಾಷ್ಟ್ಯಾಗ್ “ನಾನ್ದಾನ್ಪಾ ರಜನೀಕಾಂತ್” (ನಾನು ರಜನೀಕಾಂತ್) ಹಲವಾರು ಗಂಟೆಗಳ ಕಾಲ ಟ್ವಿಟರ್ ಟ್ರೆಂಡ್ಗಳಲ್ಲಿ ಅಗ್ರಸ್ಥಾನದಲ್ಲಿತ್ತು.
ತೂತುಕುಡಿ ಸಮೀಪದ ಪಂದರಂಪಟ್ಟಿ ನಿವಾಸಿಯಾಗಿರುವ ಬಿಕಾಂ ಪದವೀಧರ ಕೆ.ಸಂತೋಷ ರಾಜ್(21) ಸ್ಟರ್ಲೈಟ್ ವಿರೋಧಿ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ ಕಾಲೇಜ್ ಸ್ಟುಡೆಂಟ್ಸ್ ಫೆಡರೇಷನ್ ರೂಪಿಸಿದ್ದ. ಮಾ.22ರಂದು ಫೆಡರೇಷನ್ನ ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಜಾಥಾದಲ್ಲಿ ಸಾಗುತ್ತಿದ್ದಾಗ ಪೊಲೀಸರ ಲಾಠಿ ಪ್ರಹಾರದಿಂದ ತೀವ್ರವಾಗಿ ಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ದಾಖಲಾದಾಗಿನಿಂದಲೂ ಗಾಯಾಳುಗಳನ್ನು ಭೇಟಿಯಾಗಲು ಬರುವ ವಿಐಪಿಗಳಿಗೆ ಮುಜುಗರವುಂಟು ಮಾಡುವ ಪ್ರಶ್ನೆಗಳನ್ನು ಆತ ಕೇಳುತ್ತಲೇ ಇದ್ದಾನೆ. ಈ ಪೈಕಿ ಉಪ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ,ಸಚಿವ ಕಡಂಬೂರ್ ಸಿ. ಅವರೂ ಸೇರಿದ್ದಾರೆ.
ಬುಧವಾರ ಮುಜುಗರದ ಪ್ರಶ್ನೆಯನ್ನೆದುರಿಸಿದ ರಜನೀಕಾಂತ್ ಅವರು ಮುಗುಳ್ನಗೆಯನ್ನೇ ಉತ್ತರವನ್ನಾಗಿ ನೀಡಿ ಹೊರಗೆ ನಡೆದಿದ್ದರು.