ಮಾತುಕತೆ ವಿಫಲ: ಬ್ಯಾಂಕ್ ನೌಕರರ ಮುಷ್ಕರ ಆರಂಭ
ಹೊಸದಿಲ್ಲಿ, ಮೇ 30: ಬ್ಯಾಂಕ್ ನೌಕರರ ಯೂನಿಯನ್ ಕರೆ ನೀಡಿರುವ ಎರಡು ದಿನಗಳ ಮುಷ್ಕರದ ಮೊದಲ ದಿನ ದೇಶದಾದ್ಯಂತ ಬ್ಯಾಂಕಿಂಗ್ ಸೇವೆಗೆ ತಡೆಯಾಗಿದ್ದು , ಎಟಿಎಂ ಸೇವೆಗೂ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವೇತನ ಹೆಚ್ಚಳದ ಪ್ರಮಾಣ ಕಡಿಮೆಯಾಗಿದೆ ಎಂದು ಅಸಮಾಧಾನಗೊಂಡಿರುವ ಬ್ಯಾಂಕ್ ನೌಕರರ ಒಕ್ಕೂಟದ ಮನ ಒಲಿಸಲು ಸರಕಾರ ವಿಫಲವಾಗಿದೆ. ಬ್ಯಾಂಕಿಂಗ್ ಯೂನಿಯನ್ಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಪದಾಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಬುಧವಾರ ಮುಷ್ಕರದಲ್ಲಿ ಭಾಗಿಯಾದ ಕಾರಣ ದೇಶದಾದ್ಯಂತ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಿದೆ.
ಕಳೆದ ಬಾರಿ ಶೇ.15ರಷ್ಟು ವೇತನ ಏರಿಕೆಯಾಗಿದ್ದರೆ ಈ ಬಾರಿ ಶೇ.2ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ(ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ. 1-1-2012ರಿಂದ ಚಾಲ್ತಿಯಲ್ಲಿರುವ 10ನೇ ದ್ವಿಪಕ್ಷೀಯ ವೇತನ ಒಪ್ಪಂದದ ಪ್ರಕಾರ ಒಟ್ಟು ವೇತನದ ಶೇ.15ರಷ್ಟು ಹೆಚ್ಚಳಕ್ಕೆ ಐಬಿಎ(ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್) ಸಮ್ಮತಿಸಿದೆ ಎಂದು ವೆಂಕಟಾಚಲಂ ಹೇಳಿದ್ದಾರೆ.