ಎಟಿಎಸ್ ಎಸ್ಪಿ ರಾಜೇಶ್ ಸಹಾನಿ ಸಾವು: ರಾಜೀನಾಮೆ ನೀಡಿದ ಉ.ಪ್ರ. ಪೊಲೀಸ್ ಅಧಿಕಾರಿ
ಲಕ್ನೋ, ಮೇ 31: ಎಟಿಎಸ್ ಎಎಸ್ಪಿ ರಾಜೇಶ್ ಸಹಾನಿ ಸಾವಿನ ಕುರಿತು ಸಿಬಿಐ ತನಿಖೆಗೆ ಉತ್ತರಪ್ರದೇಶ ಸರಕಾರ ಶಿಫಾರಸು ಮಾಡಿದೆ. ಈ ನಡುವೆ ರಾಜ್ಯ ಪೊಲೀಸ್ನ ಇನ್ಸ್ಪೆಕ್ಟರ್ ಒಬ್ಬರು ಸಹಾನಿ ಸಾವಿಗೆ ಎಟಿಎಸ್ನ ಐಜಿಪಿ ಕಾರಣ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದಾರೆ.
ರಾಜ್ಯ ಡಿಜಿಪಿ ಒ.ಪಿ. ಸಿಂಗ್ ಅವರಿಗೆ ರವಾನಿಸಿದ ಪತ್ರದಲ್ಲಿ ಉತ್ತರಪ್ರದೇಶದ ನಾಗರಿಕ ಪೊಲೀಸ್ ಇನ್ಸ್ಪೆಕ್ಟರ್ ಯತೇಂದ್ರ ಶರ್ಮಾ, ಐಜಿ (ಎಟಿಎಸ್) ಹಾಗೂ ಅವರ ನಿಕಟವರ್ತಿ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಶರ್ಮಾ ಅವರು 2001ರಲ್ಲಿ ನೇರ ನೇಮಕಾತಿಯಲ್ಲಿ ಎಟಿಎಸ್ಗೆ ಸೇರಿದ್ದರು. ಪ್ರಸ್ತುತ ಅವರು ಲಕ್ನೋದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ರಾಷ್ಟ್ರಪತಿ ಅವರ ಶೌರ್ಯ ಪ್ರಶಸ್ತಿಗೂ ಭಾಜನರಾಗಿದ್ದರು.
‘‘ಪ್ರಾಮಾಣಿಕ ಹಾಗೂ ಬದ್ಧ ಅಧಿಕಾರಿ ರಾಜೇಶ್ ಸಹಾನಿಯಂತವರಿಗೆ ಈ ಸ್ಥಿತಿ ಬರುವುದಾದರೆ, ಪೊಲೀಸ್ ಅಧಿಕಾರಿಯ ಹುದ್ದೆಯಲ್ಲಿ ಮುಂದುವರಿಯುವುದಕ್ಕೆ ಯಾವುದೇ ಅರ್ಥ ಇಲ್ಲ. ಹಿರಿಯ ಅಧಿಕಾರಿಗಳು ತಮ್ಮ ಕಿರಿಯರನ್ನು ನಿಂದಿಸುತ್ತಾರೆ, ಕಿರುಕುಳ ನೀಡುತ್ತಾರೆ, ಹಣಕ್ಕಾಗಿ ಬೇಡಿಕೆ ಒಡ್ಡುತ್ತಾರೆ’’ ಎಂದು ಶರ್ಮಾ ಆರೋಪಿಸಿದ್ದಾರೆ.