ರಮಝಾನ್ ನಲ್ಲಿ ದೇವರನ್ನು ಒಲಿಸಲು ಮಗಳನ್ನೇ ಬಲಿಕೊಟ್ಟ ತಂದೆಯ ಬಂಧನ
ನವಾಬ್ ಅಲಿ
ಜೋಧ್ಪುರ, ಜೂ.10: ಪವಿತ್ರ ರಮಝಾನ್ ಮಾಸದಲ್ಲಿ ದೇವರನ್ನು ಒಲಿಸಲು ಮಗಳನ್ನೇ ಬಲಿಕೊಟ್ಟ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನವಾಬ್ ಅಲಿ ಎಂಬಾತ ಬಂಧಿತ ಆರೋಪಿ. ಈತನ ಹಿರಿಯ ಮಗಳು ರಿಝ್ವಾನಾ(4) ಕೊಲೆಯಾದವಳು. ರಿಝ್ವಾನಾಳ ಮೃತದೇಹ ಮನೆಯಲ್ಲಿ ಶುಕ್ರವಾರ ಮುಂಜಾನೆ ಪತ್ತೆಯಾಗಿತ್ತು. ಕತ್ತು ಸೀಳಿ ಬಾಲಕಿಯನ್ನು ಹತ್ಯೆ ಮಾಡಲಾಗಿತ್ತು ಎಂದು ಜೋಧ್ಪುರ ಪೊಲೀಸ್ ಅಧೀಕ್ಷಕ ರಾಜನ್ ದುಷ್ಯಂತ್ ಹೇಳಿದ್ದಾರೆ.
ತನಿಖೆಗೆ ಶ್ವಾನದಳ ಹಾಗೂ ಎಫ್ಎಸ್ಎಲ್ ತಂಡವನ್ನು ಕರೆಸಲಾಗಿತ್ತು. ಮನೆಯನ್ನು ಒಳಗಿನಿಂದ ಬೀಗ ಹಾಕಿರುವುದು ಮನೆಯವರ ಬಗ್ಗೆಯೇ ಸಂಶಯ ಬರಲು ಕಾರಣವಾಗಿತ್ತು ಎಂದು ದುಷ್ಯಂತ್ ವಿವರಿಸಿದ್ದಾರೆ. ಪೊಲೀಸರು ಮನೆಯವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ, ರಮಝಾನ್ ಮಾಸದಲ್ಲಿ ದೇವರ ಕೃಪೆಗೆ ಪಾತ್ರವಾಗುವ ಸಲುವಾಗಿ ತಾನೇ ಈ ಕೃತ್ಯ ಎಸಗಿರುವುದಾಗಿ ಆರೋಪಿ ನವಾಬ್ ಅಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಅಲಿ, ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಜತೆಗೆ ಛಾವಣಿಯಲ್ಲಿ ಮಲಗಿದ್ದರು. ರಿಝ್ವಾನಾ ಮರುದಿನ ಮುಂಜಾನೆ ನಾಪತ್ತೆಯಾಗಿರುವುದು ಕಂಡುಬಂತು. ಶೋಧ ನಡೆಸಿದಾಗ ಮನೆಯ ಕೆಳಅಂತಸ್ತಿನಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬಹುಶಃ ಬೆಕ್ಕು ಈ ಬಾಲಕಿಯನ್ನು ಕೊಂದಿರಬೇಕು ಎಂದು ಅಲಿ ತನ್ನ ಕುಟುಂಬವನ್ನು ನಂಬಿಸಲು ಯತ್ನಿಸಿದ್ದ.
ಗುರುವಾರ ಬೆಳಗ್ಗೆ ಬಾಲಕಿಯನ್ನು ಮಾರುಕಟ್ಟೆಗೆ ಕರೆತಂದು ಸಿಹಿತಿಂಡಿಗಳನ್ನು ಕೊಡಿಸಿದ್ದ. ಮಧ್ಯರಾತ್ರಿ ಕೆಳ ಅಂತಸ್ತಿಗೆ ಕರೆ ತಂದು ತೊಡೆಯಲ್ಲಿ ಕೂರಿಸಿಕೊಂಡು, ಹರಿತವಾದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಮೇಲೆ ಬಂದು ಎಲ್ಲರ ಜತೆಗೆ ಮಲಗಿದ್ದ ಎನ್ನುವುದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.