ಅಂದು ರಾಷ್ಟ್ರೀಯ ಕುಸ್ತಿ ಪಟು .. ಇಂದು ಗ್ಯಾಂಗ್ ಸ್ಟರ್ ,,, !
ರೊಹ್ಟಕ್, ಜೂ.13: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ರಾಕೇಶ್ ಮೋಕ್ರಿಯಾ ಎಂಬಾತನನ್ನು ರೊಹ್ಟಕ್ ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ಕಳೆದ ವರ್ಷದ ಜೂನ್ ನಲ್ಲಿ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಅಸನ್ ಗ್ರಾಮದ ಬಲ್ಬೀರ್ ಸಿಂಗ್ ಎಂಬಾತನ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ ಪೊಲೀಸರು ತಿಳಿಸಿದ್ದಾರೆ.
ಬಲ್ಬೀರ್ ಸಿಂಗ್ ಕೊಲೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ರಾಕೇಶ್ ನ ಸುಳಿವು ನೀಡಿದವರಿಗೆ ಪೊಲೀಸರು 25 ಸಾವಿರ ರೂ. ಬಹುಮಾನ ಘೋಷಿಸಿದ್ದರು.
ಕೆಲವು ದಿನಗಳ ಹಿಂದೆ ಬಂಧಿಸಲ್ಪಟ್ಟ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ನೀಡಿದ ಸುಳಿವಿನಂತೆ ಪೊಲೀಸರು ರಾಕೇಶ್ ನನ್ನು ಬಂಧಿಸಿದ್ದಾರೆ.ಈತನಿಂದ ಪಿಸ್ತೂಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಕೇಶ್ 2003ರಲ್ಲಿ ರಾಷ್ಟ್ರೀಯ ಕುಸ್ತಿ ಟೂರ್ನಮೆಂಟ್ ನಲ್ಲಿ ಹರ್ಯಾಣ ತಂಡವನ್ನು ಪ್ರತಿನಿಧಿಸಿ ಚಿನ್ನ ಜಯಿಸಿದ್ದನು. ಅದೇ ವರ್ಷ ನಡೆದ ನ್ಯಾಶನಲ್ ಗೇಮ್ಸ್ ನಲ್ಲಿ ಕಂಚು ಪಡೆದಿದ್ದನು. ಬಳಿಕ ಆತ ಗ್ಯಾಂಗ್ ಸ್ಟರ್ ಆಗಿ ಬದಲಾಗಿದ್ದ ಎಂದು ತಿಳಿದು ಬಂದಿದೆ.
2005ರಲ್ಲಿ ರಾಕೇಶ್ ಝಾಜ್ಜರ್ ನಿವಾಸಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟು 6 ವರ್ಷಗಳ ಜೈಲುವಾಸ ಅನುಭವಿಸಿ ಹೊರಬಂದಿದ್ದನು. ಬಳಿಕ ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವರಿಸಿದ್ದನು.