ಮಧ್ಯಪ್ರದೇಶ: ಗೋರಕ್ಷಣಾ ಮಂಡಳಿ ಮುಖ್ಯಸ್ಥನಿಗೆ ಸಂಪುಟ ಸಚಿವರ ದರ್ಜೆ!
ಭೋಪಾಲ,ಜೂ.13: ಮಧ್ಯಪ್ರದೇಶ ಸರಕಾರವು ರಾಜ್ಯ ಗೋ ರಕ್ಷಣಾ ಮಂಡಳಿಯ ಅಧ್ಯಕ್ಷ ಸ್ವಾಮಿ ಅಖಿಲೇಶ್ವರಾನಂದ ಅವರನ್ನು ಸಂಪುಟ ಸಚಿವರ ದರ್ಜೆಗೆ ಪದೋನ್ನತಿಗೊಳಿಸಿದೆ. ಕಳೆದ ಎಪ್ರಿಲ್ನಲ್ಲಿ ಶಿವರಾಜ ಸಿಂಗ್ ನೇತೃತ್ವದ ರಾಜ್ಯದ ಬಿಜೆಪಿ ಸರಕಾರವು ಅಖಿಲೇಶ್ವರಾನಂದ ಸೇರಿದಂತೆ ಐವರು ಧಾರ್ಮಿಕ ನಾಯಕರಿಗೆ ಸಹಾಯಕ ಸಚಿವರ ಸ್ಥಾನಮಾನವನ್ನು ನೀಡಿ, ನರ್ಮದಾ ಸಂರಕ್ಷಣೆ ಕುರಿತ ಸಮಿತಿಗೆ ಸದಸ್ಯರನ್ನಾಗಿ ನೇಮಕಗೊಳಿಸಿತ್ತು.
ಕೆಲವು ವಿವಾದಾಸ್ಪದ ಧಾರ್ಮಿಕ ವ್ಯಕ್ತಿಗಳ ಜೊತೆಗೆ ತನ್ನನ್ನು ಸಮಿತಿಗೆ ನೇಮಕಗೊಳಿಸಿರುವ ಬಗ್ಗೆ ಅಖಿಲೇಶ್ವರಾನಂದ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರಕಾರದ ಈ ನಿರ್ಧಾರ ಹೊರಬಿದ್ದಿದೆ ಎನ್ನಲಾಗಿದೆ.
ಅಖಿಲೇಶ್ವರಾನಂದ ಅವರು ಕೆಲವು ಸದಸ್ಯರ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ ಚವಾಣ್ಗೆ ಪತ್ರವೊಂದನ್ನು ಬರೆದಿದ್ದು, ಸಮಿತಿಗೆ ರಾಜೀನಾಮೆ ನೀಡಲು ಬಯಸಿರುವುದಾಗಿ ತಿಳಿಸಿದ್ದರೆನ್ನಲಾಗಿದೆ. ತನ್ನನ್ನು ಈ ವಿವಾದಾತ್ಮಕ ವ್ಯಕ್ತಿಗಳಿಗೆ ಸಮನಾಗಿ ಪರಿಗಣಿಸಿರುವುದು ತನಗೆ ಮಾಡಿರುವ ಅವಮಾನ ಎಂದು ತಾನು ಭಾವಿಸಿದ್ದೇನೆ ಎಂದೂ ಅವರು ತಿಳಿಸಿದ್ದರು.