ಆರೋಪಿಗಳ ಕಾನೂನು ವೆಚ್ಚ ಭರಿಸಲು ಮುಂದಾದ ಬಿಜೆಪಿ ಸಂಸದ
ಗೋಕಳ್ಳರೆಂದು ಶಂಕಿಸಿ ಇಬ್ಬರನ್ನು ಥಳಿಸಿ ಕೊಂದ ಪ್ರಕರಣ
ರಾಂಚಿ,ಜು.15: ರಾಜ್ಯದ ಗೊಡ್ಡಾ ಜಿಲ್ಲೆಯಲ್ಲಿ ಗೋಕಳ್ಳರೆಂಬ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಿ ಕೊಂದ ಪ್ರಕರಣದಲ್ಲಿಯ ನಾಲ್ವರು ಆರೋಪಿಗಳ ಕಾನೂನು ವೆಚ್ಚವನ್ನು ತಾನು ಭರಿಸುವುದಾಗಿ ಗೊಡ್ಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಿಶಿಕಾಂತ ದುಬೆ ಹೇಳಿದ್ದಾರೆ. ಇದು ತನ್ನ ವೈಯಕ್ತಿಕ ನಿರ್ಧಾರವೆಂದು ಹೇಳಿಕೊಂಡಿರುವ ಅವರು,ಆರೋಪಿಗಳನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇಡೀ ಗ್ರಾಮವೇ ಪ್ರಕರಣದಲ್ಲಿ ಭಾಗಿಯಾಗಿತ್ತು. ಈ ನಾಲ್ವರ ದನಗಳು ಕಳುವಾಗಿದ್ದವು ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವುದು ಏಕೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ದುಬೆ ಪ್ರಶ್ನಿಸಿದರು.
ಬುಧವಾರ ಬೆಳಿಗ್ಗೆ ದನಗಳನ್ನು ಕದ್ದ ಆರೋಪದಲ್ಲಿ ಗೊಡ್ಡಾ ಜಿಲ್ಲೆಯ ದುಲ್ಲು ಗ್ರಾಮಸ್ಥರು ಸಿರಾಬುದ್ದೀನ ಅನ್ಸಾರಿ(35) ಮತ್ತು ಮುರ್ತಝಾ ಅನ್ಸಾರಿ(30) ಎನ್ನುವವರನ್ನು ಥಳಿಸಿ ಕೊಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುನ್ಶಿ ಮುರ್ಮು,ಕಾಮೇಶ್ವರ ಸೋರೆನ್,ಕಿಶನ್ ರಾಯ್ ಮತ್ತು ಭುಕುಲ್ ಕಿಷ್ಕು ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.