ತನ್ನ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ವರದಿ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ
ಬೆಂಗಳೂರು, ಜೂ.27: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ತನ್ನ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂಬ ಎಸ್ಐಟಿ ವರದಿಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರೈ, ಇನ್ನು “ನನ್ನ ಧ್ವನಿಯು ಮತ್ತಷ್ಟು ಗಟ್ಟಿಯಾಗುತ್ತದೆ. ಅವರೆಂದೂ ದ್ವೇಷ ರಾಜಕಾರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಕನ್ನಡ ಸುದ್ದಿ ವಾಹಿನಿಯೊಂದು ವರದಿ ಮಾಡಿರುವಂತೆ, ಪ್ರಕಾಶ್ ರೈ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಮಾತನಾಡಿರುವ ಕಾರಣಕ್ಕೆ ಅವರನ್ನು ಹತ್ಯೆ ಮಾಡಲು ಗೌರಿ ಲಂಕೇಶ್ ಹಂತಕರು ಯೋಜನೆ ರೂಪಿಸಿದ್ದರು ಎಂದು ವಿಶೇಷ ತನಿಖಾ ತಂಡದ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನೂ ಹತ್ಯೆ ಮಾಡಲು ಸಂಚು ರೂಪಿಸಿದ್ದ ತಂಡ ಈ ಕಾರ್ಯಾಚರಣೆಗೆ ಅಪರೇಶನ್ ಕಾಕ ಎಂದು ಹೆಸರಿಟ್ಟಿತ್ತು. ತನ್ನ ಹತ್ಯೆ ಸಂಚಿನ ಬಗ್ಗೆ ಮಾತನಾಡಿರುವ ಪ್ರಕಾಶ್ ರಾಜ್, ಧ್ವನಿಗಳನ್ನು ಅಡಗಿಸಲು ಇವರೆಷ್ಟು ಸಂಚು ರೂಪಿಸಿದ್ದಾರೆ ಎಂಬುದನ್ನು ನಾವು ನೋಡಬಹುದು. ಆದರೆ ಇದರಿಂದ ನನ್ನ ಧ್ವನಿ ಮತ್ತಷ್ಟು ಗಟ್ಟಿಯಾಗಲಿದೆ. ಇಂಥ ದ್ವೇಷ ರಾಜಕಾರಣ ಮಾಡಿ ನೀವು ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದೀರಾ ಹೇಡಿಗಳೇ ಎಂದು ಕಿಡಿಕಾರಿದ್ದಾರೆ.