ವಿದ್ಯಾರ್ಥಿಗೆ ಸಾಲ ನಿರಾಕರಣೆ: ಬ್ಯಾಂಕಿಗೆ ಹೈಕೋರ್ಟ್ ತರಾಟೆ
ಚೆನ್ನೈ, ಜೂ.30: ಇಲ್ಲಿಯ ಶ್ರೀ ಸಾಯಿರಾಮ ಸಿದ್ಧ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಯೋರ್ವನಿಗೆ ಸಾಲವನ್ನು ಮಂಜೂರು ಮಾಡಲು ನಿರಾಕರಿಸಿದ್ದಕ್ಕಾಗಿ ತಿರುವಣ್ಣಾಮಲೈ ಜಿಲ್ಲೆಯಲ್ಲಿನ ಸರಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ತೀವ್ರ ತರಾಟೆಗೆತ್ತಿಕೊಂಡಿದೆ. ಕಾಲೇಜು ತನ್ನ ನಿರ್ಗಮಿತ ವಿದ್ಯಾರ್ಥಿಗಳ ಪ್ಲೇಸ್ಮೆಂಟ್ ದಾಖಲೆಗಳನ್ನು ಕಾಯ್ದುಕೊಂಡಿಲ್ಲ ಎಂಬ ನೆಪವೊಡ್ಡಿ ಬ್ಯಾಂಕು ಸಾಲವನ್ನು ನಿರಾಕರಿಸಿತ್ತು.ವಿದ್ಯಾರ್ಥಿ ಎಸ್.ನವೀನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ನ್ಯಾ.ಎಸ್.ವೈದ್ಯನಾಥನ್ ಅವರು,ಬ್ಯಾಂಕಿನ ಅರಣಿ ಶಾಖೆಯು ನೀಡಿರುವ ಕ್ಷುಲ್ಲಕ ಕಾರಣಗಳಿಂದಾಗಿ ವಿದ್ಯಾರ್ಥಿಯ ಭವಿಷ್ಯವು ಪಣಕ್ಕೊಡ್ಡಲ್ಪಟ್ಟಿರುವುದು ದುರದೃಷ್ಟಕರವಾಗಿದೆ ಎಂದು ಹೇಳಿದರು.
ಬ್ಯಾಂಕ್ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡ ನ್ಯಾಯಾಧೀಶರು,ಸಾಲವನ್ನು ನಿರಾಕರಿಸಿರುವ ಅಧಿಕಾರಿಗಳಿಗೆ ಒಂದು ಲಕ್ಷ ರೂ.ದಂಡವನ್ನು ವಿಧಿಸಬಹುದಾಗಿತ್ತಾದರೂ,ಪರಿಷ್ಕೃತ ಐಬಿಎಲ್ ಮಾದರಿ ಶಿಕ್ಷಣ ಸಾಲ ಯೋಜನೆ,2015ರ ನಿಯಮಗಳನ್ನು ಪಾಲಿಸುವುದಾಗಿ ಬ್ಯಾಂಕಿನ ಭರವಸೆಯ ಮೇರೆಗೆ ದಂಡವನ್ನು ವಿಧಿಸುತ್ತಿಲ್ಲ ಎಂದು ಹೇಳಿದರು. ಅರ್ಜಿದಾರ ವಿದ್ಯಾರ್ಥಿಯ ಸಾಲದ ಅರ್ಜಿಯನ್ನು ಪರಿಶೀಲಿಸುವುದಾಗಿ ಬ್ಯಾಂಕಿನಿಂದ ಮುಚ್ಚಳಿಕೆಯನ್ನೂ ಅದು ಪಡೆದುಕೊಂಡಿತು.
2014-15ರ ರಾಜ್ಯ ಮಂಡಳಿ ಪರೀಕ್ಷೆಯಲ್ಲಿ ನವೀನ್ 1,017 ಅಂಕಗಳನ್ನು ಗಳಿಸಿದ್ದು,ಶ್ರೀ ಸಾಯಿರಾಮ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡು,ಪರಿಚಿತರಿಂದ ಸಾಲ ಪಡೆದುಕೊಂಡು ಶಿಕ್ಷಣ ಶುಲ್ಕವನ್ನು ಪಾವತಿಸಿದ್ದರು. ಮುಂದಿನ ಶುಲ್ಕ ಪಾವತಿಗಾಗಿ 2016ರಲ್ಲಿ ಶಿಕ್ಷಣ ಸಾಲಕ್ಕಾಗಿ ಅಲ್ಲಿಸಿದ್ದ ಅರ್ಜಿಯನ್ನು ಬ್ಯಾಂಕು ತಿರಸ್ಕರಿಸಿತ್ತು.
ನಂತರ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ ನವೀನ್ ತನಗೆ ಸಾಲವನ್ನು ಮಂಜೂರು ಮಾಡಲು ಬ್ಯಾಂಕಿಗೆ ನಿರ್ದೇಶವನ್ನು ನೀಡುವಂತೆ ಕೋರಿಕೊಂಡಿದ್ದರು.