ಆರ್ಟಿಐ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ನೋಟಿಸ್
ಹೊಸದಿಲ್ಲಿ, ಜು.2: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರ ಪ್ರಶ್ನೆಗಳ ಮೇಲ್ವಿಚರಾಣೆಯನ್ನು ನೋಡಿಕೊಳ್ಳುವ ಉನ್ನತ ಅಧಿಕಾರಿಗಳನ್ನು ನಿಯೋಜನೆ ಮಾಡದಿರುವ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಹಾಗೂ ಎಂಟು ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಹುದ್ದೆಗಳು ಭರ್ತಿಯಾಗದ ಕಾರಣ ಮಾಹಿತಿ ಹಕ್ಕಿನಡಿ ಅರ್ಜಿಗಳಿಗೆ ಪ್ರತಿಕ್ರಿಯಿಸುವಲ್ಲಿ ವಿಳಂಬವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಈ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿರುವ ಸರ್ವೋಚ್ಚ ನ್ಯಾಯಾಲಯ, ಅರ್ಜಿ ವಿಲೇವರಿಯಲ್ಲಿ ಉಂಟಾಗಿರುವ ತೀವ್ರ ವಿಳಂಬದ ಹೊರತಾಗಿಯೂ ಈ ಹುದ್ದೆಗಳನ್ನು ಯಾಕೆ ಭರ್ತಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿದೆ. ಮಹಾರಾಷ್ಟ್ರವೊಂದರಲ್ಲೇ ಸುಮಾರು 40,000 ಮನವಿಗಳು ಮತ್ತು ದೂರುಗಳು ವಿಲೇವಾರಿಯಾಗದೆ ಬಾಕಿಯುಳಿದಿವೆ ಎಂದು ಈ ಕುರಿತು ಶ್ರೇಷ್ಠ ನ್ಯಾಯಾಲಯದಲ್ಲಿ ಹಾಕಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಕರ್ನಾಟಕದಲ್ಲಿ ಆರು ಹುದ್ದೆಗಳು ಖಾಲಿಯಿದ್ದು ಇಲ್ಲಿ ಸುಮಾರು 33,000 ಮನವಿಗಳು ಮತ್ತು ದೂರುಗಳು ವಿಲೇವರಿಯಾಗಲು ಬಾಕಿಯಿವೆ. ಕೇರಳದಲ್ಲಿ ಕೇವಲ ಒಬ್ಬರು ಆಯುಕ್ತರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆಯೋಗದಲ್ಲಿ ಸುಮಾರು 14,000 ವಿಲೇವರಿಯಾಗದ ಮನವಿಗಳು ಮತ್ತು ದೂರುಗಳು ಇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.