ಮೆಹುಲ್ ಚೋಕ್ಸಿ ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಲು ನ್ಯಾಯಾಲಯದ ಮೆಟ್ಟಿಲೇರಲಿರುವ ಇಡಿ
ಮುಂಬೈ/ಹೊಸದಿಲ್ಲಿ, ಜು. ೩: ಗೀತಾಂಜಲಿ ಜೆಮ್ಸ್ನ ಮಾಲಕ ಮೆಹುಲ್ ಚೋಕ್ಸಿ ಅವರನ್ನು ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸುವಂತೆ ಹಾಗೂ ಪಿಎನ್ಬಿ ಹಗರಣಕ್ಕೆ ಸಂಬಂಧಿಸಿ 6000 ಕೋ. ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಮುಂಬೈ ವಿಶೇಷ ನ್ಯಾಯಾಲಯದ ಮೆಟ್ಟಿಲೇರಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.
ಹಣ ಅಕ್ರಮ ವರ್ಗಾವಣೆ ಕಾನೂನು ಅಡಿಯಲ್ಲಿ ಚೋಕ್ಸಿ ಹಾಗೂ ಇತರ 13 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪಪಟ್ಟಿ ಹಾಗೂ ಕ್ರಿಮಿನಲ್ ಪ್ರಾಸಿಕ್ಯೂಶನ್ ದೂರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯ ಮಂಗಳವಾರ ಪರಿಗಣಿಸಿದೆ.
ಆರೋಪ ಪಟ್ಟಿಯ ಆಧಾರದಲ್ಲಿ ಚೋಕ್ಸಿಗೆ ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಹಣೆಪಟ್ಟಿ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಶೀಘ್ರ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬ್ಯಾಂಕ್ಗಳಿಗೆ 9000 ಕೋ. ರೂ. ವಂಚಿಸಿದ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಮನವಿ ಸಲ್ಲಿಸಿದ ರೀತಿಯಲ್ಲೇ ಮನವಿ ಸಲ್ಲಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.
ಸೊತ್ತು ವಶಪಡಿಸಿಕೊಳ್ಳಲು ಅವಕಾಶ ನೀಡುವ ಇತ್ತೀಚೆಗೆ ರೂಪಿಸಲಾಗಿರುವ ಪರಾರಿಯಾಗಿರುವ ಆರ್ಥಿಕ ಅಪರಾಧ ಕಾಯಿದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಲಿದೆ.