ಕೇರಳ: ಸೈಬರ್ ಅಪರಾಧ ತಡೆಗಟ್ಟಲು ಅತ್ಯಾಧುನಿಕ ಕೇಂದ್ರ ಸ್ಥಾಪನೆಗೆ ನಿರ್ಧಾರ
ಕೊಚ್ಚಿ, ಜು.4: ಕಳೆದ ಮೂರು ವರ್ಷಗಳಲ್ಲಿ ಪದೇಪದೇ ಸರಕಾರದ ವೆಬ್ಸೈಟ್ಗಳ ಮೇಲೆ ಹ್ಯಾಕರ್ಗಳ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಧುನಿಕ ಭದ್ರತಾ ಕಾರ್ಯಾಚರಣೆ ಕೇಂದ್ರ(ಎಸ್ಒಸಿ)ವನ್ನು ಸ್ಥಾಪಿಸಲು ಕೇರಳ ಸರಕಾರ ನಿರ್ಧರಿಸಿದೆ.
ರಚನೆ, ಕಾರ್ಯನಿರ್ವಹಣೆ, ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ಈ ಕೇಂದ್ರವು ಸರಕಾರದ ವೆಬ್ಸೈಟ್ಗಳ ಹಾಗೂ ಡೇಟಾ ಸರ್ವರ್ಗಳ ಸೈಬರ್ ಭದ್ರತೆಗೆ ಎದುರಾಗುವ ಬೆದರಿಕೆಯನ್ನು ಪತ್ತೆಹಚ್ಚಿ, ಅದನ್ನು ವಿಶ್ಲೇಷಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ ಟೀಂ-ಕೇರಳ(ಸಿಇಆರ್ಟಿ-ಕೆ)ದ ಮ್ಯಾನೇಜರ್ ಎ.ರಂಜಿತ್ ತಿಳಿಸಿದ್ದಾರೆ.
ರಾಜ್ಯ ಸರಕಾರದ ಪ್ರಮುಖ ಸೈಬರ್ ಸೆಕ್ಯುರಿಟಿ ಯೋಜನೆ ಎಂದು ಹೇಳಲಾಗಿರುವ ಎಸ್ಒಸಿಗಳನ್ನು ಆರಂಭಿಸುವ ಔಪಚಾರಿಕ ಪ್ರಕ್ರಿಯೆಗಳನ್ನು ಕೇರಳ ರಾಜ್ಯ ಐಟಿ ವಿಭಾಗವು ಆರಂಭಿಸಿದ್ದು ಇದಕ್ಕೆ ಸುಮಾರು 5ರಿಂದ 7 ಕೋಟಿ ರೂ.ವೆಚ್ಚವಾಗಲಿದೆ. ಎಸ್ಒಎಸ್ ಕೇಂದ್ರ ಆರಂಭಿಸುವ ಬಗ್ಗೆ ಅನುಭವಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಎಸ್ಒಎಸ್ ಕೇಂದ್ರಗಳ ಮೂಲಕ ನೆಟ್ವರ್ಕ್, ಸರ್ವರ್ಗಳು, ಎಂಡ್ಪಾಯಿಂಟ್ಗಳು, ಮಾಹಿತಿ ಮೂಲಗಳು, ಅಪ್ಲಿಕೇಷನ್ಗಳು, ವೆಬ್ಸೈಟ್ಗಳು ಹಾಗೂ ಇತರ ವ್ಯವಸ್ಥೆಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಿ ಅವನ್ನು ವಿಶ್ಲೇಷಿಸಲಾಗುತ್ತದೆ.
ನಿಯಮಬಾಹಿರ ಚಟುವಟಿಕೆ ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸೈಬರ್ ದಾಳಿಯನ್ನು ತಡೆಯುವ ಮುನ್ನೆಚ್ಚರಿಕಾ ಕೇಂದ್ರವಾಗಿ ಎಸ್ಒಎಸ್ ಕಾರ್ಯನಿರ್ವಹಿಸಲಿದೆ ಎಂದು ರಂಜಿತ್ ತಿಳಿಸಿದ್ದಾರೆ. 2017ರ ಎಪ್ರಿಲ್ನಿಂದ 2018ರ ಜನವರಿ ವರೆಗಿನ ಅವಧಿಯಲ್ಲಿ 114 ಸರಕಾರಿ ಪೋರ್ಟಲ್ಗಳೂ ಸೇರಿ 22,207 ಭಾರತೀಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ ಟೀಂ-(ಸಿಇಆರ್ಟಿ-ಇನ್)ನ ವರದಿಯಲ್ಲಿ ತಿಳಿಸಲಾಗಿದೆ.