ಕಾಂಗ್ರೆಸ್ ವಕ್ತಾರೆಯ ಪುತ್ರಿಯ ಅತ್ಯಾಚಾರಗೈಯುವುದಾಗಿ ಬೆದರಿಕೆ: ಆರೋಪಿಯ ಬಂಧನ
ಮುಂಬೈ, ಜು.5: ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಟ್ವಿಟರ್ ಮೂಲಕ ಬೆದರಿಕೆ ಒಡ್ಡಿದ ಆರೋಪದಲ್ಲಿ ಗಿರೀಶ್ ಮಹೇಶ್ವರಿ ಎಂಬ ವ್ಯಕ್ತಿಯೊಬ್ಬನನ್ನು ಅಹ್ಮದಾಬಾದ್ನಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಬಳಿಕ ಆರೋಪಿಯ ಬಂಧನವಾಗಿದೆ. ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುವ ಮಹಿಳೆಯರ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಇಂತಹ ಜನರ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಿಯಾಂಕಾ ಚತುರ್ವೇದಿ ತಿಳಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಮಂದ್ಸೋರ್ ಎಂಬಲ್ಲಿ 7 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಿಯಾಂಕಾ ಚತುರ್ವೇದಿ ಹೆಸರಲ್ಲಿ ನಕಲಿ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿತ್ತು. ಇದಕ್ಕೆ ಟ್ವಿಟರ್ ಮೂಲಕ ಪ್ರಿಯಾಂಕರನ್ನು ಹಲವರು ನಿಂದಿಸಿದ್ದು, ಗಿರೀಶ್ ಎಂಬಾತನ ಟ್ವಿಟರ್ನಲ್ಲಿ ಪ್ರಿಯಾಂಕರ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಲಾಗಿತ್ತು.