ರಾಹುಲ್ ಗಾಂಧಿ ಕೊಕೇನ್ ಸೇವಿಸುತ್ತಾರೆ: ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ, ಜು.5: ಪಂಜಾಬ್ನ ಮಾದಕದ್ರವ್ಯ ಪರೀಕ್ಷೆಯು ರಾಹುಲ್ ಗಾಂಧಿಯಿಂದ ಆರಂಭವಾಗಬೇಕು ಎಂದು ಕೇಂದ್ರ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ಹೇಳಿಕೆ ನೀಡಿದ ಬೆನ್ನಿಗೇ ಬಿಜೆಪಿಯ ಇನ್ನೊರ್ವ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿ ಕೊಕೇನ್ ಸೇವಿಸುತ್ತಾರೆ ಹಾಗಾಗಿ ಮಾದಕದ್ರವ್ಯ ಪರೀಕ್ಷೆಯಲ್ಲಿ ವಿಫಲವಾಗುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಎಲ್ಲ ಸರಕಾರಿ ನೌಕರರಿಗೆ ವಾರ್ಷಿಕ ಮಾದಕದ್ರವ್ಯ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊರಡಿಸಿರುವ ಆದೇಶಕ್ಕೆ ಗುರುವಾರದಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮೃತ್ ಕೌರ್ ಬಾದಲ್, ಶೇ. 70 ಪಂಜಾಬಿಗಳು ನಶಾಕೋರರಾಗಿದ್ದಾರೆ ಎಂದು ಹೇಳುವವರೂ ಸೇರಿದಂತೆ ಕಾಂಗ್ರೆಸ್ನ ಎಲ್ಲ ನಾಯಕರು ಮಾದಕದ್ರವ್ಯ ಪರೀಕ್ಷೆಗೆ ಒಳಪಡಬೇಕು ಎಂದು ಹೇಳಿಕೆ ನೀಡಿದ್ದರು.
ಐದು ವರ್ಷಗಳ ಹಿಂದೆ ರಾಹುಲ್ ಗಾಂಧಿ, ಪಂಜಾಬ್ನಲ್ಲಿ ಶೇ. 70 ಯುವಕರು ಮಾದಕದ್ರವ್ಯ ವ್ಯಸನಿಗಳಾಗಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ನೆನಪಿಸಿದ ಕೌರ್ ಪರೋಕ್ಷವಾಗಿ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.