ಉತ್ತರಾಖಂಡದಲ್ಲಿ ಮಳೆಯ ಅಬ್ಬರಕ್ಕೆ ಹನ್ನೊಂದು ಬಲಿ
ಡೆಹ್ರಾಡೂನ್, ಜು.11: ಮಾನ್ಸೂನ್ ಮಳೆ ಉತ್ತರಾಖಂಡ ರಾಜ್ಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ರಾಜಧಾನಿ ಡೆಹ್ರಾಡೂನ್ನಲ್ಲಿ ಈವರೆಗೆ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಡೆಹ್ರಾಡೂನ್ನ ಸೀಮಾದ್ವರ್ನಲ್ಲಿ ಕಟ್ಟಡವೊಂದು ಧರಾಶಾಹಿಯಾದ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಮೂರು ಮಂದಿ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮನೆಯೊಂದು ಕುಸಿದು ಅದರೊಳಗಿದ್ದ ನಾಲ್ವರು ಮೃತಪಟ್ಟ ಘಟನೆ ಶಾಸ್ತ್ರಿನಗರದಲ್ಲಿ ಸಂಭವಿಸಿದೆ. ಪಿತೋಗಡದಲ್ಲಿ ತೂಗು ಸೇತುವೆ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿದ್ದರೆ, ಮುನ್ಸಾರಿ ಮತ್ತು ದರ್ಚುಲದಲ್ಲಿ ರಸ್ತೆಗಳಿಗೆ ಹಾನಿ ಸಂಭವಿಸಿದೆ. ಭೂಕುಸಿತ ಸಂಭವಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 94 ಸಂಪೂರ್ಣ ಕುಸಿದಿದೆ. ಭಾರತೀಯ ಸಶಸ್ತ್ರಪಡೆ, ಇಂಡೊ-ಟಿಬೆಟ್ ಗಡಿ ಪೊಲೀಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಗಡಿ ಭದ್ರತಾ ಪಡೆ ಸದ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿವೆ. ರಾಜ್ಯದಲ್ಲಿ ಮಳೆಯ ಆರ್ಭಟ ಇನ್ನೂ ಮೂರು ದಿನಗಳ ಕಾಲ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಯಾವುದೇ ವಿಪತ್ತನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿರುವಂತೆ ಸ್ಥಳೀಯ ಆಡಳಿತಕ್ಕೆ ಸರಕಾರ ಸೂಚಿಸಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ಎಲ್ಲ ಸರಕಾರಿ ಅಧಿಕಾರಿಗಳ ರಜೆಯನ್ನು ಮತ್ತು ಇತರ ರಜೆಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಎಲ್ಲ ಅಧಿಕಾರಿಗಳು ಯಾವುದೇ ತುರ್ತುಸ್ಥಿತಿಯಲ್ಲಿ ತಕ್ಷಣ ಪ್ರತಿಕ್ರಿಯಿಸಲು ಸಿದ್ಧವಾಗಿರುವಂತೆ ಸೂಚಿಸಿದ್ದಾರೆ.