‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾಪಕ್ಕೆ ರಜನಿಕಾಂತ್ ಬೆಂಬಲ
ಚೆನ್ನೈ, ಜು. 15: ನಟ ಹಾಗೂ ರಾಜಕಾರಣಿ ರಜನಿಕಾಂತ್ ರವಿವಾರ ‘ಒಂದು ದೇಶ ಒಂದು ಚುನಾವಣೆ’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಹಾಗೂ ಈ ಕ್ರಮ ಖಂಡಿತವಾಗಿ ಸಾರ್ವಜನಿಕ ಹಣವನ್ನು ಉಳಿಸಲಿದೆ ಎಂದು ಹೇಳಿದ್ದಾರೆ. ‘‘ಒಂದು ದೇಶ, ಒಂದು ಚುನಾವಣೆಗೆ ನಾನು ಬೆಂಬಲ ನೀಡುತ್ತೇನೆ. ಇದು ಸಮಯ ಹಾಗೂ ಹಣ ಉಳಿಸುತ್ತದೆ’’ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ‘ಒಂದು ದೇಶ, ಒಂದು ಚುನಾವಣೆ’ಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ನಿರ್ಧಾರವನ್ನು ಅನುಷ್ಠಾನಗೊಳಿಸಲು ಒಮ್ಮತ ರೂಪಿಸಬೇಕು ಹಾಗೂ ಇದು 2014ರ ವರೆಗೆ ಸಮಯ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದರು. ಈ ಹಿಂದೆ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾಪಕ್ಕೆ ಕಾರಣ ಉಲ್ಲೇಖಿಸಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ರಾಷ್ಟ್ರದ ಚುನಾವಣಾ ಪ್ರಕ್ರಿಯೆ ಸ್ಥಿರವಾಗಲಿದೆ ಹಾಗೂ ಸಾರ್ವಜನಿಕ ಹಣ ಉಳಿತಾಯವಾಗಲಿದೆ ಎಂದಿದ್ದರು. ಆಗಾಗ ಚುನಾವಣೆ ನಡೆಸುವುದರಿಂದ ಸಾರ್ವಜನಿಕ ಹಣ ವೆಚ್ಚವಾಗುತ್ತದೆ. ಅಧಿಕಾರಿಗಳನ್ನು ನಿಯೋಜಿಸಬೇಕಾಗುತ್ತದೆ. ಇದರಿಂದ ಆಡಳಿತಕ್ಕೆ ಅಡ್ಡಿ ಉಂಟಾಗುತ್ತದೆ. ನಮ್ಮ ಪ್ರಜಾಪ್ರಭುತ್ವ 70 ವರ್ಷ ಹಳೆಯದು. ಚುನಾವಣಾ ಪ್ರಕ್ರಿಯೆಯಲ್ಲಿ ಅದಕ್ಕೆ ಕೆಲವು ಸ್ಥಿರತೆ ಇರಬೇಕಾಗುತ್ತದೆ. ಆದುದರಿಂದ ಕಾನೂನು ಆಯೋಗದ ಶಿಫಾರಸನ್ನು ಕಾಯೋಣ ಎಂದು ಅವರು ಹೇಳಿದ್ದರು.