ಹಗರಣ ಬಹಿರಂಗಗೊಳಿಸಿದವರ ಮೇಲೆ ದಾಳಿ ನಡೆಸಿದ 26 ಮಂದಿಯ ಬಂಧನ: ಕೇಂದ್ರ
ಹೊಸದಿಲ್ಲಿ, ಜು. 19: ಹಗರಣ ಬಯಲುಗೊಳಿಸಿದವರ ಮೇಲೆ ದಾಳಿ ನಡೆಸಿದ, ಕಳೆದ ವರ್ಷದ 8 ಪ್ರಕರಣಗಳಲ್ಲಿ ಒಟ್ಟು 26 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ತಿಳಿಸಿದ್ದಾರೆ.
ಇದಲ್ಲದೆ, ದೇಶದಲ್ಲಿ 2017ರಲ್ಲಿ ಆರ್ಟಿಐ ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 22 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ರಾಜ್ಯಸಭೆಗೆ ಲಿಖಿತ ಹೇಳಿಕೆ ನೀಡಿದರು. ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಹಾಗೂ ಮಾಹಿತಿದಾರರಿಗೆ ರಕ್ಷಣೆ (ಪಿಐಡಿಪಿಐ) ನಿಲುವಳಿ ಅಡಿ ಗೊತ್ತುಪಡಿಸಿದ ಸಂಸ್ಥೆಯಾಗಿರುವ ಕೇಂದ್ರ ವಿಚಕ್ಷಣಾ ಆಯೋಗ ಕಿರುಕುಳ, ಜೀವಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಹಗರಣ ಬಹಿರಂಗಗೊಳಿಸುವ ವ್ಯಕ್ತಿಗಳ ಆರೋಪವನ್ನು ಪರಿಗಣಿಸಿದೆ ಎಂದು ಸಿಂಗ್ ಹೇಳಿದ್ದಾರೆ.
ಕಿರುಕುಳದ ಬಗೆಗಿನ ದೂರುಗಳನ್ನು ದೂರುದಾರರಿಗೆ ರಕ್ಷಣೆ ನೀಡುವ ಸೂಚನೆಯೊಂದಿಗೆ ಸಂಬಂಧಿತ ಸಂಸ್ಥೆಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಜೀವ ಬೆದರಿಕೆ ಸಂದರ್ಭ ರಕ್ಷಣೆ ನೀಡುವ ಸೂಚನೆಯೊಂದಿಗೆ ವಿಷಯವನ್ನು ಗೃಹ ಸಚಿವಾಲಯದಿಂದ ನಾಮನಿರ್ದೇಶಿತ ಸಂಬಂಧಿತ ಸಂಸ್ಥೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.