ಗೋರಕ್ಷಣೆ ಹೆಸರಲ್ಲಿ ವ್ಯಕ್ತಿಯ ಹತ್ಯೆ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಖಂಡನೆ
ಜೈಪುರ, ಜು.21: ಗೋ ಕಳ್ಳ ಸಾಗಾಟದ ಶಂಕೆಯಲ್ಲಿ ಗ್ರಾಮಸ್ಥರು 28ರ ಹರೆಯದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಲೆಗೈದಿರುವ ಘಟನೆಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಖಂಡನೆ ವ್ಯಕ್ತಪಡಿಸಿದ್ದಾರೆ.
‘‘ಗ್ರಾಮಸ್ಥರ ಗುಂಪು ಹತ್ಯೆಗೆ ಬಲಿಯಾಗಿರುವ ಅಕ್ಬರ್ ಖಾನ್ ಹಾಗೂ ಪರಾರಿಯಾಗಿರುವ ಅಸ್ಲಂ ಶುಕ್ರವಾರ ತಡರಾತ್ರಿ ಎರಡು ದನಗಳನ್ನು ಕೊಂಡೊಯ್ಯುತ್ತಿದ್ದಾಗ ಅವರನ್ನು ಬೆನ್ನಟ್ಟಿ ಹಲ್ಲೆ ನಡೆಸಲಾಗಿದೆ. ಅಕ್ಬರ್ನನ್ನು ಗ್ರಾಮಸ್ಥರು ಹಿಡಿದು ಚೆನ್ನಾಗಿ ಥಳಿಸಿ ಸಾಯಿಸಿದರೆ, ಮತ್ತೋರ್ವ ಅಸ್ಲಂ ಗುಂಪಿನಿಂದ ತಪ್ಪಿಸಿಕೊಂಡಿದ್ದಾನೆ. ಎರಡು ಗೋವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ವಿವಿಧ ಐಪಿಸಿ ಸೆಕ್ಷನ್ಗಳಡಿ ದೂರು ದಾಖಲಿಸಿಕೊಂಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಈತನಕ ಆರೋಪಿಗಳನ್ನು ಬಂಧಿಸಿಲ್ಲ’’ಎಂದು ರಾಮಗಢ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಭಾಶ್ ಚಂದ್ ಹೇಳಿದ್ದಾರೆ.
ಹತ್ಯೆ ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ರಾಜೇ,‘‘ಅಲ್ವರ್ ಜಿಲ್ಲೆಯಲ್ಲಿ ದನವನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಥಳಿಸಿ ಕೊಂದಿರುವ ಘಟನೆ ಖಂಡನೀಯ. ತಪ್ಪಿತಸ್ಥರ ವಿರುದ್ಧ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು’’ ಎಂದು ಟ್ವೀಟ್ ಮಾಡಿದ್ದಾರೆ.