ಗೋರಕ್ಷಣೆ ಹೆಸರಿನಲ್ಲಿ ಮಹಿಳೆಯರಿಗೆ ಅಪಾಯಕಾರಿಯಾಗುತ್ತಿರುವ ಭಾರತ: ಉದ್ಧವ್ ಠಾಕ್ರೆ
ಹೊಸದಿಲ್ಲಿ, ಜು.23: ಗೋರಕ್ಷಣೆಯ ಹೆಸರಿನಲ್ಲಿ ಭಾರತವು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿ ಬದಲಾಗುತ್ತಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ದೇಶದ ಹಲವೆಡೆ ನಡೆಯುತ್ತಿರುವ ಗುಂಪುಹತ್ಯೆಗಳನ್ನು ಉಲ್ಲೇಖಿಸಿರುವ ಅವರು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಗೋಹತ್ಯೆ ನಡೆಯಬೇಕು ಎಂದು ಶಿವಸೇನೆ ಎಂದಿಗೂ ಹೇಳಿಲ್ಲ. ಆದರೆ ಗೋವುಗಳ ರಕ್ಷಣೆ ಹೆಸರಿನಲ್ಲಿ ದೇಶವು ಮಹಿಳೆಯರಿಗೆ ಅಪಾಯಕಾರಿಯಾಗಿ ಬದಲಾಗುತ್ತಿದೆ. ಈ ಬಗ್ಗೆ ನಾವು ನಾಚಿಕೆಪಟ್ಟುಕೊಳ್ಳಬೇಕು. ನೀವು ಗೋಮಾತೆಯನ್ನು ರಕ್ಷಿಸಬಯಸುತ್ತೀರಿ . ಆದರೆ ಮಾತೆಯ ವಿಚಾರವೇನು?" ಎಂದು ಠಾಕ್ರೆ ಪ್ರಶ್ನಿಸಿದರು.
"ಹಿಂದುತ್ವ, ಹಿಂದೂಗಳ ಸ್ಥಿತಿ, ರಾಷ್ಟ್ರೀಯ ಕಾಳಜಿ ಹಾಗು ದೇಶದ ಭದ್ರತೆ ವಿಚಾರದಲ್ಲಿನ ಸಮಾನ ಸಿದ್ಧಾಂತಗಳಿಂದ 25 ವರ್ಷಗಳಿಂದ ಶಿವಸೇನೆ ಬಿಜೆಪಿ ಜೊತೆ ಕೈಜೋಡಿಸಿತ್ತು. "ಈಗ ದೇಶದಲ್ಲಿರುವ ಹಿಂದುತ್ವದ ಕಲ್ಪನೆಯನ್ನು ನಾನು ಒಪ್ಪುವುದಿಲ್ಲ. ಗೋರಕ್ಷಣೆ ಹೆಸರಿನಲ್ಲಿ ನೀವು ಇನ್ನೊಬ್ಬರು ಬೀಫ್ ತಿನ್ನುತ್ತಿದ್ದಾರೆಯೇ?, ಇಲ್ಲವೇ ಎಂದು ಗಮನಹರಿಸುವುದಾದರೆ ಅದು ಕಪಟತನ" ಎಂದವರು ಹೇಳಿದರು.