ಉತ್ತರಪ್ರದೇಶ: ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ
ಮುಝಫರ್ನಗರ, ಆ.11: ಕಳ್ಳನೆಂಬ ಶಂಕೆಯಲ್ಲಿ ಗ್ರಾಮಸ್ಥರು ಒಟ್ಟುಗೂಡಿ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಶುಕ್ರವಾರ ಸಂಜೆ ಬಿಜೋಪರ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವರ ವಿರುದ್ಧ ಕೊಲೆ ಕೇಸು ದಾಖಲಿಸಲಾಗಿದ್ದು, ಈ ತನಕ ಇಬ್ಬರನ್ನು ಬಂಧಿಸಲಾಗಿದೆ ಎಂದು ಚಾಪರ್ ಪೊಲೀಸ್ ಠಾಣಾಧಿಕಾರಿ ಸುಭಾಶ್ ರಾಥೋಡ್ ಶನಿವಾರ ತಿಳಿಸಿದ್ದಾರೆ.
ಗ್ರಾಮಸ್ಥರ ಥಳಿತದಿಂದ ಸಾವನ್ನಪ್ಪಿರುವ ವ್ಯಕ್ತಿಯನ್ನು ಕಪಿಲ್ ತ್ಯಾಗಿ ಎಂದು ಗುರುತಿಸಲಾಗಿದೆ. ತ್ಯಾಗಿ ಅವರ ಕುಟುಂಬ ಸದಸ್ಯರು, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರ್ಟ್ ತ್ಯಾಗಿ ಸಹಿತ ಇತರರೊಂದಿಗೆ ಸೇರಿಕೊಂಡು ಚಾಪರ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿ ಇನ್ನಷ್ಟು ಮಂದಿಯನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಮೃತ ಕಪಿಲ್ ಮುಗ್ದನಾಗಿದ್ದ. ಕೆಲಸ ನಿಮಿತ್ತ ಬಿಜೋಪುರ್ಗೆ ತೆರಳಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು ಅಹಿತಕರ ಘಟನೆ ಸಂಭವಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹಳ್ಳಿಯಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುಭಾಶ್ ರಾಥೋಡ್ ಹೇಳಿದ್ದಾರೆ.