ನವಾಝ್ ಶರೀಫ್ ರನ್ನು ತಬ್ಬಿದ ಮೋದಿಯನ್ನು ಯಾರೂ ಪ್ರಶ್ನಿಸುವುದಿಲ್ಲ: ಸಿಧು
ಹೊಸದಿಲ್ಲಿ, ಆ.21: ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ತೀವ್ರ ಟೀಕೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಮಾರಂಭದಲ್ಲಿ ಮೊದಲ ಸಾಲಿನಲ್ಲಿ ಕುಳಿತ ಬಗ್ಗೆಯೂ ಸಿಧು ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೊನೆಯ ನಿಮಿಷದಲ್ಲಿ ನನ್ನ ಆಸನ ಬದಲಾಯಿತು. ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ನನಗೆ ಕೊನೆಯ 5 ನಿಮಿಷಗಳಲ್ಲಿ ಹೇಳಲಾಯಿತು” ಎಂದವರು ಹೇಳಿದರು.
ಇದೇ ಸಂದರ್ಭ ಅವರು, ತನ್ನ ಭೇಟಿ ರಾಜಕೀಯ ಉದ್ದೇಶದ್ದಲ್ಲ, ಬದಲಿಗೆ ಹಳೆಯ ಗೆಳೆಯನೊಬ್ಬನ ಆಹ್ವಾನದ ಮೇರೆಗೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪಾಕ್ ಗೆ ಭೇಟಿ ನೀಡಿದ್ದಾರೆ ಎಂದೂ ಅವರು ಉಲ್ಲೇಖಿಸಿದರು.
“ಭೇಟಿಯ ಸಂದರ್ಭ ಪ್ರಧಾನಿ ಮೋದಿ ಆಗಿನ ಪ್ರಧಾನಿ ನವಾಝ್ ಶರೀಫ್ ರನ್ನು ತಬ್ಬಿದ್ದರು. ಆದರೆ ಮೋದಿಯನ್ನು ಯಾರೂ ಪ್ರಶ್ನಿಸುವುದಿಲ್ಲ” ಎಂದವರು ಹೇಳಿದರು.