ಕೇರಳ ಮಹಾಮಳೆ: 10 ಸಾವಿರ ಕಿ.ಮೀ. ರಸ್ತೆ, 1 ಲಕ್ಷ ಮನೆಗೆ ಹಾನಿ
ಹೊಸದಿಲ್ಲಿ, ಆ. 21: ಕೇರಳದಿಂದ ನೆರೆಗೆ ಕೊಚ್ಚಿ ಹೋದ 10,000 ಕಿ.ಮೀ. ರಸ್ತೆ ಹಾಗೂ ಹಾನಿಗೀಡಾದ 1 ಲಕ್ಷ ಮನೆಗಳನ್ನು ಮರು ನಿರ್ಮಿಸಲು ಕನಿಷ್ಠ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕೇರಳ ನೆರೆಯಿಂದ ಅತಿ ಹೆಚ್ಚು ಹಾನಿಗೀಡಾದ ಇಡುಕ್ಕಿ, ಮಲಪ್ಪುರಂ, ಕೋಟ್ಟಯಂ ಹಾಗೂ ಎರ್ನಾಕುಳಂ ಜಿಲ್ಲೆಯಲ್ಲಿ 20,000 ಕೋ. ರೂ. ನಷ್ಟ ಉಂಟಾಗಿದೆ ಎಂದು ರಾಜ್ಯ ಸರಕಾರ ಅಂದಾಜಿಸಿದೆ.
ಸರಕಾರದ ಮರು ನಿರ್ಮಾಣ ಕಾರ್ಯ ಆರಂಭಿಸುವ ಸರಕಾರದ ಯೋಜನೆ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಕಷ್ಟದ ದಿನಗಳು ಮುಂದಿವೆ’ ಎಂದಿದ್ದಾರೆ. 10 ಲಕ್ಷಕ್ಕೂ ಅಧಿಕ ನೆರೆ ಸಂತ್ರಸ್ತರು ಪರಿಹಾರ ಶಿಬಿರಗಳಲ್ಲಿ ಇದ್ದಾರೆ. ಅವರ ಯೋಗಕ್ಷೇಮ ನಮ್ಮ ಈಗಿನ ಆದ್ಯತೆ. ಮಾನವ ಹಾಗೂ ಸಾಮಗ್ರಿ ಹಾನಿಯನ್ನು ನಾವು ಅಂದಾಜಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ನೆರೆಯಿಂದ ಮನೆ ಸೇರಿದಂತೆ ಸುಮಾರು 1 ಲಕ್ಷ ಕಟ್ಟಡಗಳು; 10,000 ಕಿ. ಮೀ.ಗೂ ಅಧಿಕ ಹೆದ್ದಾರಿ, ರಸ್ತೆಗಳು; ನೂರಾರು ಸೇತುವೆಗಳು; 10 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.