ಉಮಾ ಭಾರತಿ ಖಾಸಗಿ ಭದ್ರತಾ ಅಧಿಕಾರಿ ಗುಂಡು ಹಾರಿಸಿ ಆತ್ಮಹತ್ಯೆ
ಭೋಪಾಲ್, ಆ.23: ಕೇಂದ್ರ ಸಚಿವೆ ಉಮಾ ಭಾರತಿಯ ಖಾಸಗಿ ಭದ್ರತಾ ಸಿಬ್ಬಂದಿ ಬುಧವಾರ ರಾತ್ರಿ ಭೋಪಾಲ್ನಲ್ಲಿ ತನ್ನ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಅಧಿಕಾರಿ ರಾಮಮೋಹನ್ ದೌನೆರಿಯ ಬುಧವಾರದಂದು ರಾತ್ರಿ ಪಾನಮತ್ತರಾಗಿ ತನ್ನ ಮನೆಗೆ ಬಂದು ಪತ್ನಿ ಜೊತೆ ಜಗಳವಾಡಿದ್ದರು. ಅವರು ತನ್ನ ಪತ್ನಿಗೆ ಹೊಡೆಯಲು ಆರಂಭಿಸಿದಾಗ ಆಕೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ದೌನೆರಿಯರನ್ನು ಎಷ್ಟು ಸಮಾಧಾನಿಸಲು ಪ್ರಯತ್ನಿಸಿದರೂ ಅವರು ಕೇಳಲಿಲ್ಲ.ಕೊನೆಗೆ ಪೊಲೀಸರು ದೌನೆರಿಯ ಮತ್ತು ಅವರ ಪತ್ನಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಗೆ ತೆರಳುತ್ತಿದ್ದ ದಾರಿಯಲ್ಲಿ ದೌನೆರಿಯ ತಮ್ಮಲ್ಲಿದ್ದ ಸರ್ವಿಸ್ ರಿವಾಲ್ವರನ್ನು ತೆಗೆದು ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.