ಭಾರತದಿಂದ ಪರಾರಿಯಾಗುವ ಮೊದಲು ವಿಜಯ್ ಮಲ್ಯ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು: ರಾಹುಲ್ ಗಾಂಧಿ
ಲಂಡನ್, ಆ.26: ಬ್ಯಾಂಕ್ ಗಳಿಗೆ ಕೋಟ್ಯಂತರ ರೂಪಾಯಿ ಸಾಲ ಬಾಕಿಯಿಟ್ಟು ಪರಾರಿಯಾದ ವಿಜಯ್ ಮಲ್ಯ ಭಾರತ ತೊರೆಯುವ ಮೊದಲು ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲಂಡನ್ನಲ್ಲಿ ಭಾರತದ ಪತ್ರಕರ್ತರೊಂದಿಗೆ ಮಾತಾಡುತ್ತಿದ್ದ ವೇಳೆ ರಾಹುಲ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮಲ್ಯ ಭೇಟಿಯಾಗಿದ್ದ ಬಿಜೆಪಿ ನಾಯಕರ ಹೆಸರನ್ನು ಬಹಿರಂಗಪಡಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
ಭಾರತದ ಬ್ಯಾಂಕ್ ಗಳಿಗೆ ಮೋಸ ಮಾಡಿದ ವಿಜಯ್ ಮಲ್ಯರಂತಹ ಉದ್ಯಮಿಗಳು ಅನಾಯಾಸವಾಗಿ ದೇಶದಿಂದ ಹೊರಹೋಗಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅವಕಾಶ ನೀಡಿದೆ ಎಂದವರು ಆರೋಪಿಸಿದರು. ರಾಹುಲ್ ಗಾಂಧಿಯ ಹೇಳಿಕೆಗೆ ಈವರೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿಲ್ಲ.
ಮಲ್ಯರಿಗೆ ಸಂಬಂಧಪಟ್ಟಂತೆ ಹೇಳುವುದಾದರೆ ಭಾರತದ ಜೈಲು ಅವರ ಪಾಲಿಗೆ ಅರ್ಹವಾಗಿದೆ. ನ್ಯಾಯ ಎಲ್ಲ ಭಾರತೀಯರಿಗೂ ಸಮಾನವಾಗಿದೆ ಎಂದು ರಾಹುಲ್ ಹೇಳಿದರು. ಭಾರತದ ಜೈಲುಗಳ ಕೆಟ್ಟ ಸ್ಥಿತಿಯನ್ನು ಬೆಟ್ಟು ಮಾಡಿ ವಿಜಯ್ ಮಲ್ಯ ವಿದೇಶದಲ್ಲಿ ಉಳಿದುಕೊಂಡಿರುವುದಕ್ಕೆ ರಾಹುಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.