ನಿರಶನನಿರತ ಹಾರ್ದಿಕ್ರನ್ನು ಆಸ್ಪತ್ರೆಗೆ ಸೇರಿಸಲು ಸರಕಾರದ ಚಿಂತನೆ
ಅಹ್ಮದಾಬಾದ್, ಆ.29: ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಅವರು ಮೀಸಲಾತಿ ಮತ್ತು ರೈತರ ಸಾಲ ಮನ್ನಾ ಬೇಡಿಕೆಗಳನ್ನು ಮುಂದಿರಿಸಿಕೊಂಡು ತನ್ನ ನಿವಾಸದಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ನಿರಶನ ಮುಷ್ಕರ ಬುಧವಾರ ಐದನೇ ದಿನವನ್ನು ಪ್ರವೇಶಿಸಿದೆ. ಅವರ ಆರೋಗ್ಯಸ್ಥಿತಿ ಹದಗೆಟ್ಟಿದ್ದು,ಅದು ಇನ್ನಷ್ಟು ವಿಷಮಿಸಿದರೆ ರಾಜ್ಯದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸುವ ಬಗ್ಗೆ ಗುಜರಾತ್ ಸರಕಾರವು ಪರಿಶೀಲಿಸುತ್ತಿದೆ.
ಮಧ್ಯಾಹ್ನ ಹಾರ್ದಿಕ್ರ ತಪಾಸಣೆ ನಡೆಸಿದ ವೈದ್ಯರು ಅವರ ಶರೀರದಲ್ಲಿ ಕೆಟೋನ್ ಮತ್ತು ಎಸಿಟೋನ್ ಮಟ್ಟಗಳು ಹೆಚ್ಚಿದ್ದು,ಇದು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡಬಹುದು ಎಂದು ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ತನ್ಮಧ್ಯೆ ಹಾರ್ದಿಕ್ ಭೇಟಿಗಾಗಿ ಜನರು ನಿರಂತರವಾಗಿ ಬರುತ್ತಲೇ ಇದ್ದಾರೆ.
Next Story