ಸುಳ್ಳು ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ: ಸಾಮಾಜಿಕ ಹೋರಾಟಗಾರ ವರವರ ರಾವ್
ಹೈದರಾಬಾದ್, ಆ. 30: ಸುಳ್ಳು ಹೇಳಿಕೆಯ ಆಧಾರದಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಗೆ ಕಾನೂನಿನಲ್ಲಿ ನಂಬಿಕೆ ಇದೆ ಎಂದು ಕ್ರಾಂತಿಕಾರಿ ಕವಿ, ಸಾಮಾಜಿಕ ಹೋರಾಟಗಾರ ವರವರ ರಾವ್ ಹೇಳಿದ್ದಾರೆ.
ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಕ್ರಾಂತಿಕಾರಿ ಕವಿ ವರವರ ರಾವ್ ಹೈದರಾಬಾದ್ನಲ್ಲಿ ಗೃಹ ಬಂಧನದಲ್ಲಿ ಇದ್ದಾರೆ. ಐದು ಮಂದಿ ಆರೋಪಿಗಳಾದ ವರವರ ರಾವ್, ಗೌತಮ್ ನೌಲಾಖಾ, ಅರುಣ್ ಫೆರೇರಾ, ವೆರ್ನನ್ ಗೊನ್ಸಾಲ್ವೆಸ್ ಹಾಗೂ ಸುಧಾ ಭಾರದ್ವಾಜ್ ಅವರನ್ನು ಸೆಪ್ಟಂಬರ್ 5ರ ವರೆಗೆ ಗೃಹ ಬಂಧನದಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಪುಣೆ ಪೊಲೀಸರಿಗೆ ನಿರ್ದೇಶಿಸಿತ್ತು.
ಮಾವೋವಾದಿಗಳೊಂದಿಗೆ ನಂಟು ಹೊಂದಿದ ಹಾಗೂ ಭೀಮಾ ಕೋರೆಗಾಂವ್ ಹೋರಾಟದ 200ನೇ ವರ್ಷದ ಹಿನ್ನೆಲೆಯಲ್ಲಿ ಎಲ್ಗಾರ್ ಪರಿಷದ್ ಈ ವರ್ಷ ಜನವರಿಯಲ್ಲಿ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಈ ಐವರು ಮಾನವ ಹಕ್ಕು ಕಾರ್ಯಕರ್ತರು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರನ್ನು ಧಿಡೀರ್ ಬಂಧಿಸಿ ಜೈಲಿನಲ್ಲಿರಿಸಿರುವುದರಿಂದ ನ್ಯಾಯಾಂಗ ತಲ್ಲಣಗೊಂಡಿದೆ ಎಂಬುದನ್ನು ಬಂಧಿತ ಮಾನವ ಹಕ್ಕು ಹೋರಾಟಗಾರರ ಕುರಿತು ನ್ಯಾಯಾಂಗ ಇತ್ತೀಚೆಗೆ ನೀಡಿದ ಅದೇಶ ಸ್ಪಷ್ಟವಾಗಿ ತೋರಿಸುತ್ತದೆ ಎಂದು ವರವರ ರಾವ್ ಅವರ ವಕೀಲ ಮಿಹಿರ್ ದೇಸಾಯಿ ತಿಳಿಸಿದ್ದಾರೆ.