ಕೇರಳ ನೆರೆ: ರಾಜನಾಥ್ ಸಿಂಗ್ ರನ್ನು ಭೇಟಿಯಾದ ಕೇರಳದ ಸರ್ವ ಪಕ್ಷಗಳ ನಿಯೋಗ
ಹೊಸದಿಲ್ಲಿ, ಆ. 30: ಕೇರಳದ ಸರ್ವ ಪಕ್ಷಗಳ ನಿಯೋಗ ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದೆ ಹಾಗೂ ನೆರೆ ಪೀಡಿತ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ, ವಿದೇಶಿ ನೆರವು ಸ್ವೀಕರಿಸಲು ಅನುವು ಮಾಡಿಕೊಡುವಂತೆ ವಿನಂತಿಸಿದೆ.
ಕಾಂಗ್ರೆಸ್, ಸಿಪಿಎಂ, ಆರ್ಎಸ್ಪಿ, ಕೇರಳ ಕಾಂಗ್ರೆಸ್ (ಮಣಿ)ಗೆ ಸೇರಿದ 11 ಸಂಸದರು ಹಾಗೂ ಒರ್ವ ಸ್ವತಂತ್ರ ಸಂಸದ ಒಳಗೊಂಡ ಈ ನಿಯೋಗ ಕೇರಳ ಎದುರಿಸಿದ ಭೀಕರ ಪ್ರವಾಹ, ಉಂಟಾದ ನಾಶನಷ್ಟವನ್ನು ಕೇಂದ್ರ ಸಚಿವರಿಗೆ ವಿವರಿಸಿದೆ.
‘‘ಪಕ್ಷಬೇಧ ಮರೆತು ಕೇರಳವನ್ನು ಮರು ನಿರ್ಮಿಸಲು ನಾವು ಸಂಘಟಿತರಾಗಿದ್ದೇವೆ. ನಮಗೆ ಇನ್ನಷ್ಟು ದೇಣಿಗೆ ಬೇಕಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತನಾಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
Next Story