ಕೊಲೆಗೀಡಾದ ಮಹಿಳೆಯ 12 ವರ್ಷದ ಪುತ್ರನನ್ನು ದತ್ತು ಪಡೆಯಲು ನಿರ್ಧರಿಸಿದ ಪೊಲೀಸ್ ಅಧಿಕಾರಿ
ಚೆನ್ನೈ, ಸೆ. 5: ಎಲ್ಲರಿಗೂ ಮಾದರಿಯಾಗುವಂತಹ ಕ್ರಮವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೂರು ದಿನಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದ 12 ವರ್ಷದ ಬಾಲಕನನ್ನು ದತ್ತು ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.
ಕಾರ್ತಿಕ್ ಎಂಬ ಹೆಸರಿನ ಈ ಬಾಲಕನ ತಾಯಿ ಪರಿಮಳಾ ಮೂರು ದಿನಗಳ ಹಿಂದೆ ಜಗಳವೊಂದರ ಹಿನ್ನೆಲೆಯಲ್ಲಿ ನೆರೆಮನೆಯಾತನಿಂದಲೇ ಕೊಲೆಗೈಯ್ಯಲ್ಪಟ್ಟರು. ಮೈಲಾಪುರದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕ ವಾರಾಂತ್ಯಕ್ಕೆ ತಾಯಿಯ ಜತೆ ವಾಸಿಸಲು ಬರುತ್ತಿದ್ದ. ಕೊಲೆ ನಡೆದಾಗ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಡಿಸಿಪಿ ಬಾಲಮುರುಗನ್, ಹತ್ಯೆಯಾದ ಮಹಿಳೆಯ ಮಗ ಠಾಣೆಯಲ್ಲಿ ಕಾದಿದ್ದನೆಂದೂ ಆತನಿಗೆ ತನ್ನ ತಾಯಿ ಕೊಲೆಗೀಡಾಗಿದ್ದಾಳೆಂದು ತಿಳಿಯದೆಂದು ಅರಿತಾಗ ಅವರು ಬಾಲಕನನ್ನು ಸಮಾಧಾನ ಪಡಿಸಿ ಆತನಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದರು. ಆತನ ಭವಿಷ್ಯದ ಬಗ್ಗೆ ಚಿಂತಿತರಾಗಿ ತಮ್ಮ ಪತ್ನಿ ಕಲಾ ರಾಣಿ ಜತೆ ಚರ್ಚಿಸಿ ಮರುದಿನ ಬಾಲಕನ ಶಾಲೆಗೆ ತೆರಳಿ ತಾನು ಆತನ ಪೋಷಕನಾಗಿ ಆತನ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಲಿಖಿತ ಹೇಳಿಕೆ ನೀಡಿ ಕಾರ್ತಿಕ್ ನನ್ನು ತನ್ನ ಮನೆಗೆ ಕರೆದುಕೊಂಡು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಒಂದು ದಿನ ಕಳೆಯುವಂತೆ ಮಾಡಿದರು.
ಬಾಲಕ ತಪ್ಪು ದಾರಿ ಹಿಡಿಯದಿರಲೆಂದು ತಾನು ಇಂತಹ ಕ್ರಮ ಕೈಗೊಂಡಿದ್ದಾಗಿ, ಆತನನ್ನು ಕಾನೂನುಬದ್ಧವಾಗಿ ತನ್ನ ಪುತ್ರನನ್ನಾಗಿ ದತ್ತು ಪಡೆಯಲು ಕ್ರಮ ಕೈಗೊಳ್ಳುತ್ತಿರುವುದಾಗಿಯೂ ಅವರು ಹೇಳಿದ್ದಾರೆ.
ಬಾಲಕನ ತಾಯಿ ನೆರೆಮನೆಯ ಭಾಗ್ಯಲಕ್ಷ್ಮಿಯ ಜತೆ ಜಗಳವಾಡಿದ್ದು ಇದರಿಂದ ಸಿಟ್ಟುಗೊಂಡ ಆಕೆಯ ಪುತ್ರ ಸೂರ್ಯ ರಾತ್ರಿ ಪರಿಮಳಾ ಮನೆಗೆ ನುಗ್ಗಿ ಆಕೆಯನ್ನು ಇರಿದು ಸಾಯಿಸಿದ್ದ.