ವರದಕ್ಷಿಣೆ ಪ್ರಕರಣಗಳು: ಆರೋಪಿಗಳ ಬಂಧನಕ್ಕೆ ಮತ್ತೆ ಪೊಲೀಸರಿಗೆ ಅಧಿಕಾರ ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಸೆ.14: ವರದಕ್ಷಿಣೆ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಪರಿಷ್ಕರಿಸಿರುವ ಸರ್ವೋಚ್ಚ ನ್ಯಾಯಾಲಯವು,ಆರೋಪಿಗಳನ್ನು ಬಂಧಿಸುವ ಪೊಲೀಸರ ಅಧಿಕಾರವನ್ನು ಮರುಸ್ಥಾಪಿಸಿದೆ. ಹಿಂದಿನ ಆದೇಶದಲ್ಲಿ ಆರೋಪಿಗಳ ಬಂಧನಕ್ಕೆ ಮುನ್ನ ವಿಶೇಷವಾಗಿ ರಚಿಸಲಾದ ಸಮಿತಿಯಿಂದ ತನಿಖೆಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಜಾಮೀನು ಕೋರುವ ಪತಿ ಅಥವಾ ಅತ್ತೆ-ಮಾವನ ಹಕ್ಕುಗಳನ್ನು ಎತ್ತಿ ಹಿಡಿದಿರುವ ಮು.ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡಿದ್ದ ಪೀಠವು,ತಮ್ಮ ಮರ್ಜಿಯಂತೆ ಯಾರನ್ನೂ ಬಂಧಿಸದಂತೆ ಪೊಲೀಸರಿಗೆ ಸೂಚಿಸಿದೆ.
ಇಬ್ಬರು ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಪರಿಷ್ಕರಿಸಿದ ಪೀಠವು, ದಂಡನಾ ಕಾನೂನಿನಲ್ಲಿನ ಲೋಪಗಳನ್ನು ಸಾಂವಿಧಾನಿಕವಾಗಿ ನಿವಾರಿಸಲು ನ್ಯಾಯಾಲಯಗಳಿಗೆ ಅವಕಾಶವಿಲ್ಲ ಎಂದು ಹೇಳಿತು. ವರದಕ್ಷಿಣೆ ಕಿರುಕುಳದ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸಂವೇದನಾಶೀಲರಾಗಿರುವಂತೆ ನೊಡಿಕೊಳ್ಳುವಂತೆ ಅದು ಎಲ್ಲ ರಾಜ್ಯಗಳ ಡಿಜಿಪಿಗಳಿಗೆ ನಿರ್ದೇಶ ನೀಡಿತು.
ಕಳೆದ ಜುಲೈನಲ್ಲಿ ಐಪಿಸಿಯ ಕಲಂ 498 ಎ(ವಿವಾಹಿಯ ಮಹಿಳೆಗೆ ಕ್ರೌರ್ಯ) ದುರುಪಯೋಗವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಇಬ್ಬರು ನ್ಯಾಯಾಧೀಶರ ಪೀಠವು, ಅಮಾಯಕ ವ್ಯಕ್ತಿಗಳು ದಂಡನೆಗೆ ಗುರಿಯಾಗದಂತೆ ನೋಡಿಕೊಳ್ಳಲು ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು. ಆರೋಪಗಳನ್ನು ದೃಢಪಡಿಸಿಕೊಳ್ಳದೆ ಯಾರನ್ನೂ ಬಂಧಿಸದಂತೆ ಪೊಲೀಸರಿಗೆ ಸೂಚನೆ ಇವುಗಳಲ್ಲಿ ಸೇರಿತ್ತು.
ಮಹಿಳಾ ಸಂಘಟನೆ ನಯನಾಧಾರ್ ಈ ತೀರ್ಪನ್ನು ವಿರೋಧಿಸಿತ್ತು ಮತ್ತು ಪತ್ನಿಯರ ಸುರಕ್ಷತೆಯ ಉದ್ದೇಶದ ಕಾನೂನಿಗೆ ಹೆಚ್ಚಿನ ಬಲವನ್ನು ನೀಡುವಂತೆ ಕೋರಿಕೊಂಡಿತ್ತು.