ನಾನು ಸಚಿವ, ಆದ್ದರಿಂದ ತೈಲ ಬೆಲೆಯೇರಿಕೆ ಬಿಸಿ ತಟ್ಟಿಲ್ಲ ಎಂದ ಕೇಂದ್ರ ಸಚಿವ ಅಠಾವಳೆ!
ಜೈಪುರ, ಸೆ.16: "ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ನನಗೆ ಸಚಿವನಾಗಿ ಪ್ರಯಾಣ ಭತ್ತೆ ಬರುತ್ತದೆ” ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
"ನಾನು ಸಚಿವನಾಗಿದ್ದನಿಂದ ತೈಲ ಬೆಲೆ ಏರಿಕೆಯ ಬಿಸಿ ನನಗೆ ತಟ್ಟಿಲ್ಲ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ವೈಯಕ್ತಿಕವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ನಿಮಗೆ ತೊಂದರೆಯಾಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಚಿವರು ಈ ಉತ್ತರ ನೀಡಿದರು. ಆದರೆ ಇತರರು ತೈಲ ಬೆಲೆ ಏರಿಕೆಯಿಂದ ತೊಂದರೆಗೀಡಾಗಿದ್ದಾರೆ ಎಂದು ಅಠಾವಳೆ ಒಪ್ಪಿಕೊಂಡರು.
"ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ಅದರ ಮೇಲೆ ವಿಧಿಸುವ ಸುಂಕವನ್ನು ಇಳಿಸುವುದು ಸರ್ಕಾರದ ಕರ್ತವ್ಯ" ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾದ ಅವರು ಸ್ಪಷ್ಟಪಡಿಸಿದರು. ಸಚಿವರು ರಾಜಸ್ಥಾನದಲ್ಲಿ ತಮ್ಮ ಸಚಿವಾಲಯದ ಕಾರ್ಯಯೋಜನೆಗಳ ಪ್ರಗತಿ ಪರಿಶೀಲಿಸಿದರು.
Next Story