ಮೇಲ್ಜಾತಿಗೆ ಶೇ. 25 ಮೀಸಲಾತಿ ನೀಡಬೇಕು: ಕೇಂದ್ರ ಸಚಿವ ಅಠಾವಳೆ
ಜೈಪುರ, ಸೆ. 15: ಮೇಲ್ಜಾತಿಗಳಿಗೆ ಶೇ. 25 ಮೀಸಲಾತಿ ನೀಡಬೇಕು ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ಸಹಾಯಕ ಸಚಿವ ರಾಮದಾಸ್ ಅಠಾವಳೆ ರವಿವಾರ ಪ್ರತಿಪಾದಿಸಿದ್ದಾರೆ. ಜೈಪುರದ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಲಾಗಿದ್ದ ‘ಮೀಟ್ ದ ಪ್ರೆಸ್’ನಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ಮೇಲ್ಜಾತಿ ಜನರು ಮೀಸಲಾತಿಗೆ ಆಗ್ರಹಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠರು, ಗುಜರಾತ್ನಲ್ಲಿ ಪಾಟೀದಾರರು, ಹರ್ಯಾಣದಲ್ಲಿ ಜಾಟರು, ರಾಜಸ್ಥಾನದಲ್ಲಿ ರಜಪೂತರು, ಉತ್ತರಪ್ರದೇಶದಲ್ಲಿ ಠಾಕೂರರು ಹಾಗೂ ಬ್ರಾಹ್ಮಣರು ಮೀಸಲಾತಿಗೆ ಆಗ್ರಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗದ ಮೀಸಲಾತಿಗೆ ಯಾವುದೇ ತೊಂದರೆ ಉಂಟಾಗದಂತೆ ಮೇಲ್ಜಾತಿಗೆ ಶೇ. 25 ಮೀಸಲಾತಿ ನೀಡಬೇಕು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಸಂಸತ್ತಿನಲ್ಲಿ ಈ ಬಗ್ಗೆ ಶಾಸನ ಮಂಜೂರು ಮಾಡುವವರೆಗೆ ಸಮಸ್ಯೆ ಪರಿಹಾರವಾಗಲಾರದು. ಕ್ರಿಕೆಟ್, ಇತರ ಕ್ರೀಡೆಗಳು ಹಾಗೂ ಸೇನೆಯಲ್ಲಿ ಕೂಡ ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.