ಪತ್ರಕರ್ತರು ಎಂದು ಹೇಳಿಕೊಂಡು ಬಿಜೆಪಿ ಕಚೇರಿಯಿಂದ ಕರೆ: ಆರೋಪ
ಸುಳ್ಳು ಸುದ್ದಿ ಹರಡುವ ಯತ್ನ ಎಂದ ಕಾಂಗ್ರೆಸ್
ಗುವಾಹಟಿ, ಸೆ.23: ಪತ್ರಕರ್ತೆ ಎಂದು ಹೇಳಿಕೊಂಡು ಬಿಜೆಪಿ ಕಚೇರಿಯಿಂದ ತನ್ನ ಕಚೇರಿಗೆ ಕರೆ ಬಂದಿದ್ದಾಗಿ ಅಸ್ಸಾಮ್ ಕಾಂಗ್ರೆಸ್ ಹೇಳಿದ್ದು, ಸುಳ್ಳು ಸುದ್ದಿ ಹರಡಲು ಬಿಜೆಪಿ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದೆ.
ರಾಜ್ಯ ಬಿಜೆಪಿಯು ಕಾಂಗ್ರೆಸ್ ನ ಈ ಆರೋಪಗಳನ್ನು ನಿರಾಕರಿಸಿದ್ದು, ಕೆಲವೊಮ್ಮೆ ಪತ್ರಕರ್ತರು ಬಿಜೆಪಿ ಕಚೇರಿಯ ದೂರವಾಣಿಗಳನ್ನು ಬಳಸುತ್ತಾರೆ. ಅದನ್ನೇ ಕಾಂಗ್ರೆಸ್ ವಿವಾದ ಮಾಡಲು ಯತ್ನಿಸುತ್ತಿದೆ ಎಂದಿದೆ.
ಅಸ್ಸಾಮ್ ಪ್ರದೇಶ ಕಾಂಗ್ರೆಸ್ ನ ಹಿರಿಯ ವಕ್ತಾರ ಬೊಬ್ಬೀಟಾ ಶರ್ಮಾರಿಗೆ ಸೆಪ್ಟಂಬರ್ 21ರಂದು ಕರೆಯೊಂದು ಬಂದಿತ್ತು. ಪ್ರಸಿದ್ಧ ಇಂಗ್ಲಿಷ್ ಚಾನೆಲ್ ನ ಪತ್ರಕರ್ತೆ ಎಂದು ಪರಿಚಯಿಸಲಾಗಿತ್ತು. ಕರೆ ಮಾಡಿದ ವ್ಯಕ್ತಿ ಗುವಾಹಟಿ, ದಿಸ್ಪುರ್, ಪಶ್ಚಿಮ ಗುವಾಹಟಿ, ಜಾಲುಕ್ಬಾರಿ, ಪಲಸ್ಬಾರಿ ಮುಂತಾದ ಕ್ಷೇತ್ರಗಳ ಮಾಹಿತಿ ಪಡೆದಿದ್ದರು ಎಂದು ಪತ್ರಿಕಾ ಪ್ರಕಟನೆಯಲ್ಲಿ ಕಾಂಗ್ರೆಸ್ ಆರೋಪಿಸಿದೆ.
“ಪತ್ರಕರ್ತರು ಎಂದು ಹೇಳಿಕೊಂಡು ಬಿಜೆಪಿ ಕಚೇರಿಯಿಂದ ಕರೆ ಮಾಡಿದ್ದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು” ಎಂದು ಶರ್ಮಾ ತಿಳಿಸಿದ್ದಾರೆ.