ರಫೇಲ್ ಒಪ್ಪಂದ ಭಾರತದ ಅತೀದೊಡ್ಡ ಭದ್ರತಾ ಹಗರಣ: ಪ್ರಶಾಂತ್ ಭೂಷಣ್
ಚೆನ್ನೈ,ಸೆ.23: ರಫೇಲ್ ಒಪ್ಪಂದವು ದೇಶದ ಅತ್ಯಂತ ದೊಡ್ಡ ಭದ್ರತಾ ಹಗರಣ ಎಂದು ವ್ಯಾಖ್ಯಾನಿಸಿರುವ ಸರ್ವೋಚ್ಚ ನ್ಯಾಯಾಲಯದ ವಕೀಲ ಪ್ರಶಾಂತ್ ಭೂಷಣ್, ಇದರ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಚೆನ್ನೈಯಲ್ಲಿ ವರದಿಗಾರರ ಜೊತೆ ಮಾತನಾಡಿದ ಭೂಷಣ್, ಅನಿಲ್ ಅಂಬಾನಿಯ ಬಹುತೇಕ ಕಂಪೆನಿಗಳು ಸಾಲದಲ್ಲಿರುವಾಗ ರಫೇಲ್ ಒಪ್ಪಂದದಲ್ಲಿ ಅವರ ರಿಲಾಯನ್ಸ್ ಡಿಫೆನ್ಸ್ನ್ನು ಡಸಾಲ್ಟ್ ವೈಮಾನಿಕ ಸಂಸ್ಥೆಯ ಭಾರತದ ಪಾಲುದಾರನನ್ನಾಗಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದು ಭಾರತದಲ್ಲಿ ನಡೆದಿರುವ ಅತ್ಯಂತ ದೊಡ್ಡ ಭದ್ರತಾ ಹಗರಣ ಮಾತ್ರವಲ್ಲ ಇದರಲ್ಲಿ ರಾಷ್ಟ್ರೀಯ ಭದ್ರತೆಯ ಜೊತೆ ರಾಜಿಮಾಡಿಕೊಳ್ಳಲಾಗಿದೆ. ಭಾರತೀಯ ವಾಯುಪಡೆಗೆ 126 ಯುದ್ಧವಿಮಾನಗಳ ಅಗತ್ಯವಿದ್ದರೆ ಈ ಒಪ್ಪಂದದಲ್ಲಿ ಅದನ್ನು 36ಕ್ಕೆ ಇಳಿಸಲಾಗಿದೆ ಎಂದು ಭೂಷಣ್ ಆರೋಪಿಸಿದ್ದಾರೆ. ಈ ಕೂಡಲೇ ಸರಕಾರ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಬೇಕು ಮತ್ತು ಒಪ್ಪಂದದ ಎಲ್ಲ ದಾಖಲೆಗಳನ್ನು ಸಮಿತಿಯ ಮುಂದಿಡಬೇಕು. ಇದರಲ್ಲಿ ಯಾವುದೇ ರಾಷ್ಟ್ರೀಯ ಭದ್ರತೆಯ ವಿಷಯವಿಲ್ಲ. ಅವರು ಈ ಒಪ್ಪಂದದಲ್ಲಿ ನಡದಿರುವ ಬೃಹತ್ ಹಗರಣವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ರಿಲಾಯನ್ಸ್ ಡಿಫೆನ್ಸನ್ನು ರಫೆಲ್ ಒಪ್ಪಂದದಲ್ಲಿ ಭಾರತದ ಪಾಲುದಾರರನ್ನಾಗಿ ಪರಿಗಣಿಸುವಂತೆ ಭಾರತದ ಸರಕಾರ ಸೂಚಿಸಿತ್ತು ಎಂದು ಫ್ರಾನ್ಸ್ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.